ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಧಾರವಾಡ ಎಲ್ಲೆ ಹೋದರೂ ಈ ಸಿನಿಮಾದ್ದೇ ಹವಾ. ಗೋಲ್ಡನ್ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಿನೆಮಾ ಗಾಳಿಪಟ 2. ಸದ್ಯ ಈ ಸಿನೆಮಾ, ಹಾಡುಗಳು ಮತ್ತು ಟ್ರೈಲರ್ ನಿಂದ ಭಾರೀ ಸದ್ದು ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಶಿವರಾಜ್ ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಬಂದು ಈ ಚಿತ್ರದ ಟ್ರೈಲರ್ ನ್ನು ಬಿಡುಗಡೆಗೊಳಿಸಿದ್ದರು.
ಇದೀಗ ಗಾಳಿಪಟ 2 ಚಿತ್ರದ ಕ್ರೇಜ್ ರಾಜ್ಯಾದ್ಯಂತ ಜೋರಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಾಮಿಡಿ ಶೋ ಕಲಾವಿದರಾದ ನಯನ ಅಂಡ್ ಟೀಮ್, ರಾಜ್ಯದ ಕೆಲವೊಂದು ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ ಸಿನೆಮಾದ ಪ್ರಚಾರಕಾರ್ಯವನ್ನು ಮಾಡುತ್ತಿದ್ದಾರೆ.
ಇನ್ನು ನಿರ್ಮಾಪಕ ಎಂ.ರಮೇಶ್ ರೆಡ್ಡಿ, ರಾಜ್ಯದ ಯಾವುದೇ ಶಾಲೆ ಅಥವಾ ಕಾಲೇಜುಗಳಿಗೆ ಪ್ರಮೋಷನ್ಗೆ ಹೋದಾಗ ಅಲ್ಲಿನ ವಿದ್ಯಾರ್ಥಿಗಳನ್ನು ವೇದಿಕೆ ಮೇಲೆ ಕರೆದು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾರೆ. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಕಥೆ ಆಧರಿಸಿರೋ ಗಾಳಿಪಟ 2 ಸಿನಿಮಾ ಮಕ್ಕಳಿಗೆ ಇಷ್ಟ ಆಗುವ ಕಥಾಹಂದರವನ್ನು ಹೊಂದಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಕೂಡ ಗಾಳಿಪಟ 2 ಸಿನಿಮಾವನ್ನು ನೋಡಲು ಉತ್ಸುಕರಾಗಿದ್ಧಾರೆ.
ಈ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಗಾಳಿಪಟ 2 ಸಿನೆಮಾವನ್ನು ನಿರ್ಮಾಪಕ ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಸಿನೆಮಾದಲ್ಲಿದೆ. ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಗಾಳಿಪಟ 2 ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಕಾಣಲಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.
ಓದಿ : ತಮ್ಮ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡ ದೀಪಿಕಾ ಪಡುಕೋಣೆ