ಟೀಸರ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರೋ ಚಿತ್ರ ಬ್ಲಿಂಕ್. ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಇಂದು ನಾಯಕಿ ಚೈತ್ರಾ ಜೆ ಆಚಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಬ್ಲಿಂಕ್' ಚಿತ್ರತಂಡ ಚಿತ್ರದಲ್ಲಿನ ಚೈತ್ರಾ ಜೆ ಆಚಾರ್ ಪಾತ್ರದ ಸಣ್ಣ ಝಲಕ್ ರಿಲೀಸ್ ಮಾಡಿ ಹುಟ್ಟುಹಬ್ಬಕ್ಕರ ಶುಭ ಕೋರಿದೆ.
ಮಹಿರಾ, ಆ ದೃಶ್ಯ, ತಲೆದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಬ್ಲಿಂಕ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡ್ರೆನ್ ಹಳ್ಳಿ ಹುಡುಗಿಯಾಗಿ ದೇವಕಿ ಅರಸ್ ಪಾತ್ರ ನಿಭಾಯಿಸಿದ್ದಾರೆ. ದೇವಕಿ ಅರಸ್ ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ ಎಂದು ಚಿತ್ರದ ನಿರ್ದೇಶಕ ಶ್ರೀನಿಧಿ ತಿಳಿಸಿದ್ದಾರೆ. ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ರಿವೀಲ್ ಆಗಿದೆ.
ಗಾಯಕಿ ಹಾಗೂ ನಟಿಯಾಗಿರುವ ಚೈತ್ರಾ ಜೆ ಆಚಾರ್ ಅವರು ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಸ್ಟ್ರಾಬೆರಿ’ ಸೇರಿದಂತೆ ಹಲವು ಸಿನಿಮಾ ಅವಕಾಶಗಳು ಇವರ ಕೈಯಲ್ಲಿವೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಸೋಜುಗಾದ ಸೂಜಿಮಲ್ಲಿಗೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಆಗಿ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
'ಬ್ಲಿಂಕ್' ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ಹೊಸ ಪ್ರತಿಭೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ಅಡಿ ರವಿಚಂದ್ರ ಎ ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: 'ಚೇತರಿಸಿಕೊಳ್ಳುತ್ತಿದ್ದೇನೆ, ಯಾವುದೇ ತೊಂದರೆ ಇಲ್ಲ': ಅಭಿಮಾನಿಗಳ ಆತಂಕ ದೂರ ಮಾಡಿದ ಸುಶ್ಮಿತಾ ಸೇನ್
ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಇರಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಶ್ರೀನಿಧಿ ಬೆಂಗಳೂರು ಸೈನ್ಸ್ ಫಿಕ್ಷನ್ ಬ್ಲಿಂಕ್ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಕಬ್ಜ ಟ್ರೇಲರ್ ಅನಾವರಣಗೊಳಿಸಲಿರುವ ಬಿಗ್ ಬಿ ಅಮಿತಾಭ್ ಬಚ್ಚನ್
ಕನ್ನಡ ಚಿತ್ರರಂಗ ಯಶಸ್ಸಿನ ಮಾರ್ಗದಲ್ಲಿದೆ. ಉತ್ತಮ ಕಥಾಹಂದರವುಳ್ಳ ಸಿನಿಮಾಗಳು ಮೂಡಿ ಬರುತ್ತಿದೆ. ಪ್ರೇಕ್ಷಕನ ಅಭಿರುಚಿ ಬದಲಾಗಿದ್ದು, ಅದಕ್ಕೆ ತಕ್ಕ ಚಿತ್ರಗಳೆಡೆಗೆ ಚಿತ್ರತಂಡಗಳು ಒತ್ತು ಕೊಡುತ್ತಿವೆ. ಅದರಂತೆ ಬ್ಲಿಂಕ್ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಇದ್ದು, ಗೆಲ್ಲುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.