ಸಿನಿಮಾ ಜೊತೆಗೆ ಟ್ರೈಲರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಗುರು ಶಿಷ್ಯರು. ಪ್ರಾದೇಶಿಕ ಸೆನ್ಸಾರ್ ಮಂಡಳಿ ಗುರು ಶಿಷ್ಯರು ಸಿನಿಮಾವನ್ನ ವೀಕ್ಷಿಸಿ, ಯಾವುದೇ ಕಟ್ ಅಥವಾ ಮ್ಯೂಟ್ಗಳಿಲ್ಲದೇ 'ಯು' ಪ್ರಮಾಣಪತ್ರ ನೀಡಿದೆ. ಚಿತ್ರವನ್ನು ಬಹಳ ಇಷ್ಟಪಟ್ಟಿರುವ ಸೆನ್ಸಾರ್ ಮಂಡಳಿಯ ಸದಸ್ಯರು, ಇದೊಂದು ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಮನೋರಂಜನಾತ್ಮಕ ಚಿತ್ರ ಎಂದು ಪ್ರಶಂಸಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವ ಚಿತ್ರತಂಡದವರ ಬೆನ್ನು ತಟ್ಟಿದ್ದಾರೆ.

ಎರಡು ಗಂಟೆ 40 ನಿಮಿಷಗಳ ಅವಧಿಯ ಈ ಚಿತ್ರವು 90ರ ದಶಕದ ಕಾಲಘಟ್ಟದ ಕಥೆಯೊಂದನ್ನು ಹೊಂದಿದೆ. ಗ್ರಾಮೀಣ ಕರ್ನಾಟಕದ ಪುಟ್ಟ ಊರೊಂದರಲ್ಲಿ ನಡೆಯುವ ಈ ಕಥೆಯಲ್ಲಿ ಖೋ-ಖೋ ಕ್ರೀಡೆಯು ಪ್ರಮುಖ ಪಾತ್ರ ವಹಿಸಲಿದ್ದು, ಶರಣ್ ಶಿಕ್ಷಕರಾಗಿ ಅಭಿನಯಿಸುತ್ತಿದ್ದಾರೆ. ಅವರೊಂದಿಗೆ ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್, ಅಪೂರ್ವ ಕಾಸರವಳ್ಳಿ ಮುಂತಾದವರು ನಟಿಸಿದ್ದಾರೆ.
ಶರಣ್ ಗುರುವಾಗಿ ನಟಿಸಿದರೆ, ಅವರಿಗೆ ಶಿಷ್ಯಂದಿರಾಗಿ ಅವರ ಮಗ ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷತ್ ನಟಿಸಿದ್ದಾರೆ.

ಗುರು ಶಿಷ್ಯರು ಚಿತ್ರವು ಶರಣ್ ನಿರ್ಮಾಣದ ಮೂರನೇ ಚಿತ್ರವಾಗಿದ್ದು, ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ ಸಂಸ್ಥೆಗಳಡಿ ಜಂಟಿಯಾಗಿ ನಿರ್ಮಿಸಲಾಗಿದೆ. ನಿರ್ಮಾಣದ ಜೊತೆಗೆ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿಯೂ ತರುಣ್ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ನಾನು ಹುಟ್ಟಿ ಬೆಳೆದ ನಾಡು ಇದು.. ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ: ನಟ ಶರಣ್
ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ ಮ್ಯಾನ್ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಹಂಪಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾಸ್ತಿ ಮಂಜು ಅವರ ಸಂಭಾಷಣೆ, ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಇದೇ ಸೆಪ್ಟಂಬರ್ 23ಕ್ಕೆ ರಾಜ್ಯಾದ್ಯಂತ ಗುರು ಶಿಷ್ಯರು ಸಿನಿಮಾ ಪ್ರೇಕ್ಷಕರರಿಗೆ ದರ್ಶನ ಆಗಲಿದೆ.