ತಿರುಚಿ(ತಮಿಳುನಾಡು): ಕರ್ತವ್ಯದಲ್ಲಿದ್ದ ವಿಶೇಷ ಸಬ್ ಇನ್ಸ್ಪೆಕ್ಟರ್ ಹತ್ಯೆ ಪ್ರಕರಣ (SSI Boominathan murder case) ಸಂಬಂಧ ತಿರುಚಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 56 ವರ್ಷದ ಭೂಮಿನಾಥನ್ ಕೊಲೆಗೀಡಾದ ಎಸ್ಎಸ್ಐ ಆಗಿದ್ದಾರೆ. ಘಟನೆ ಕಂಬನಿ ಮಿಡಿದಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮೃತ ಸಬ್ ಇನ್ಸ್ಪೆಕ್ಟರ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ನಾವಲ್ಪಟ್ಟು ಮುಖ್ಯರಸ್ತೆಯಲ್ಲಿ ಕಳೆದ ಶನಿವಾರ ಭೂಮಿನಾಥನ್ ಗಸ್ತು ತಿರುಗುತ್ತಿದ್ದರು. ಭಾನುವಾರ ಮುಂಜಾನೆ ದುಷ್ಕರ್ಮಿಗಳ ಗುಂಪೊಂದು ಮೂರು ಬೈಕ್ಗಳಲ್ಲಿ ಮೇಕೆಗಳನ್ನು ಸಾಗಿಸುತ್ತಿದ್ದರು. ಇದನ್ನು ಕಂಡ ಭೂಮಿನಾಥನ್ ವಿಚಾರಿಸುವಷ್ಟರಲ್ಲಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ತಮ್ಮ ಬೈಕ್ನಲ್ಲಿ ಭೂಮಿನಾಥನ್ ಹಿಂಬಾಲಿಸಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆ
ತಿರುಚಿ-ಪುದುಕೊಟ್ಟೈ ಮಾರ್ಗದಲ್ಲಿರುವ ಪಲ್ಲತ್ತುಪಟ್ಟಿ ಎಂಬ ಗ್ರಾಮ ಬಳಿಯಿರುವ ರೈಲ್ವೆ ಗೇಟ್ನ ಬಳಿ ಒಂದು ಬೈಕ್ ಅಡ್ಡಗಟ್ಟಿದ ಅವರು ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಪರಾರಿಯಾಗಿದ್ದ ಎರಡು ಬೈಕ್ನಲ್ಲಿದ್ದ ದುಷ್ಕರ್ಮಿಗಳು ವಾಪಸ್ ಆಗಿ ಗಲಾಟೆ ಆರಂಭಿಸಿದ್ದಾರೆ. ಇದೇ ವೇಳೆ, ತಮ್ಮ ಬಳಿ ಇದ್ದ ಕುಡುಗೋಲಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ, ಪರಾರಿಯಾಗಿದ್ದರು. ಸ್ಥಳದಲ್ಲೇ ಕುಸಿದುಬಿದ್ದ ಸಬ್ ಇನ್ಸ್ಪೆಕ್ಟರ್ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಪಿಎಸ್ಐ ಅನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಮೇಕೆ ಕಳ್ಳರು