ಬೆಂಗಳೂರು: ಬೀದಿಯಲ್ಲಿ ಓಡಾಡುವ ನೆಪದಲ್ಲಿ ಹಗಲಿನ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿಯಾಗುತ್ತಿದ್ದಂತೆ ಆ ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನನ್ನು ನಗರದ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 14.31 ಲಕ್ಷ ರೂ ಮೌಲ್ಯದ 318 ಗ್ರಾಂ ಚಿನ್ನಾಭರಣ ಹಾಗೂ ಒಂದು ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಈ ಹಿಂದೆ ಕಳ್ಳತನ ಮಾಡಿ ಜೈಲುವಾಸ ಅನುಭವಿಸಿದ್ದ. ಕಳ್ಳತನವನ್ನೇ ಚಾಳಿ ಮಾಡಿಕೊಂಡಿದ್ದ ಈತನ ವಿರುದ್ಧ ಬ್ಯಾಟರಾಯನಪುರ, ಹನುಮಂತನಗರ, ಮಾಗಡಿ ರಸ್ತೆ, ಕಲಾಸಿಪಾಳ್ಯ, ರಾಜಗೋಪಾಲನಗರ, ಉಪ್ಪಾರಪೇಟೆ, ಗಂಗಮ್ಮನಗುಡಿ, ವಿಜಯನಗರ ಸೇರಿದಂತೆ 15 ಠಾಣೆಗಳಲ್ಲಿ ದೂರು ದಾಖಲಾಗಿದೆ.
ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ 15 ದಿನಕ್ಕೇ ತನ್ನ ಹಳೆ ಚಾಳಿ ಮುಂದುವರಿಸಿದ್ದ ಖದೀಮ, ರಾಜಾಜಿನಗರ 1ನೇ ಹಂತದಲ್ಲಿ ಮನೆಗಳ್ಳತನ ಮಾಡಿದ್ದಾನೆ. ಈ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಈತನ ಮತ್ತಷ್ಟು ಪ್ರಕರಣಗಳನ್ನು ಹೊರತಗೆಯಲು ತನಿಖೆ ನಡೆಸುತ್ತಿದ್ದಾರೆ.