ತುಮಕೂರು: ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿಗಾಗಿ ಡಾ. ಸರೋಜಿನಿ ಮಹಿಷಿ ವರದಿ ಕಾಯಿದೆ ಜಾರಿಗೆ ತರಬೇಕು, ಇಲ್ಲವಾದಲ್ಲಿ ಮತ್ತೊಂದು ಗೋಕಾಕ್ ಚಳುವಳಿಯನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಕಳೆದ ಮೂರು ದಶಕಗಳಿಂದ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸದನದಲ್ಲಿ ಕನ್ನಡಿಗರಿಗೆ ಉದ್ಯೋಗದಾತೆಯಾದ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಮಂಡಿಸಬೇಕು ವರದಿ ರೂಪುಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಮರಣಶಾಸನ ವಾಗಲಿದೆ ಎಂದು ಎಚ್ಛರಿಕೆ ನೀಡಿದರು.
ವರದಿ ಜಾರಿಗೆಗೊಳಿಸಿ ಇಲ್ಲವಾದಲ್ಲಿ ಮತ್ತೊಂದು ಗೋಕಾಕ್ ಚಳುವಳಿ ಮಾಡಲಾಗುತ್ತದೆ. ಈ ಚಳುವಳಿಯ ನೇತೃತ್ವವನ್ನು ನಟ ಡಾ. ಶಿವರಾಜಕುಮಾರ್ ವಹಿಸಬೇಕು, ಅಲ್ಲದೇ ಖ್ಯಾತ ನಟರಾದ ರವಿಚಂದ್ರನ್, ಸುದೀಪ್, ಪುನೀತ್ ರಾಜಕುಮಾರ್, ದರ್ಶನ್, ಯಶ್, ಉಪೇಂದ್ರ, ಧ್ರುವ ಸರ್ಜಾ ಹಾಗೂ ಚಿತ್ರರಂಗದ ಮತ್ತಿತರ ನಟರು ಚಳುವಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿಕೊಂಡರು.