ಶಿವಮೊಗ್ಗ: ಸಾಗರದ ಉಪ ಅರಣ್ಯಾಧಿಕಾರಿಗಳ ಕಚೇರಿ ಆವರಣದ ದಾಸ್ತಾನು ಕೊಠಡಿಯ ಕಾವಲುಗಾರ ನಾಗರಾಜ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ನಾಗರಾಜ್ ಅವರ ಮೃತದೇಹ ಸಾಗರ ತಾಲೂಕು ಐಗಿನ ಬೈಲ್ನ ನೇದರಹಳ್ಳಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ.
ನಾಗರಾಜ್ ಮೃತ ದೇಹವನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ನಾಗರಾಜ್ ಜೊತೆ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಸಹ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಕಚೇರಿಯಲ್ಲಿ ಶ್ರೀಗಂಧ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತಗಳಿದ್ದವು. ಇವುಗಳನ್ನು ಕಳ್ಳತನ ಮಾಡಲು ಬಂದವರು ನಾಗರಾಜ್ನನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಾಣೆಯಾಗಿದ್ದ ನಾಗರಾಜ್ ಅವರ ಮೃತ ದೇಹ ಪತ್ತೆಯಾಗಿದ್ದು, ಶರ್ಟ್ನಲ್ಲಿ ಆತನ ಕೈಗಳೆರಡನ್ನೂ ಕಟ್ಟಿ ಹಾಕಲಾಗಿದೆ. ಸಾಗರದಿಂದ ಸುಮಾರು 10 ಕಿಮೀ ದೂರದಲ್ಲಿ ನಾಗರಾಜ್ ಮೃತ ದೇಹ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಶವದ ಬಳಿ ಬಂದ ಪೊಲೀಸರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಿ ನೌಕರನ ಜೀವಕ್ಕೆ ರಕ್ಷಣೆ ಇಲ್ಲದ ಮೇಲೆ ಜನಸಾಮಾನ್ಯರ ಗತಿ ಏನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಶೀಘ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.