ಶಿವಮೊಗ್ಗ: ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಂಚೆ ಮೂಲಕ ಸಂಸ್ಕೃತ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗುವುದು ಎಂದು ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್. ಕೆ. ಶೇಷಾಚಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಚೆ ಮೂಲಕ ಸಂಸ್ಕೃತವನ್ನು ಕಲಿಸುವ ಯೋಜನೆಯಲ್ಲಿ 16 ವರ್ಷ ಮೇಲ್ಪಟ್ಟವರು ಯಾರೇ ಆದರೂ ಭಾಗವಹಿಸಬಹುದಾಗಿದೆ. ಯಾವುದೇ ಹಿನ್ನೆಲೆಯ ಶಿಕ್ಷಣ ಪಡೆದು, ವೃತ್ತಿನಿರತರಾಗಿದ್ದರೂ ಈ ಶಿಕ್ಷಣಕ್ಕೆ ಅರ್ಹರು ಎಂದರು.
4 ಹಂತಗಳಲ್ಲಿ ಈ ಅಂಚೆ ಮೂಲಕ ಸಂಸ್ಕೃತ ಕಲಿಯಬಹುದಾಗಿದೆ. ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ, ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ನಡೆಸಲಾಗುವುದು. ಪ್ರತಿ ಹಂತದ ಶುಲ್ಕ 300. ಶಾಲೆಯಲ್ಲಿನ ನುರಿತ ಶಿಕ್ಷಕರಿಂದ ಪಾಠದ ವ್ಯವಸ್ಥೆ ಮಾಡಲಾಗುವುದು. ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಿ ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಈಗಾಗಲೇ ದೇಶದಾದ್ಯಂತ ನಡೆಸಲಾಗುತ್ತಿರುವ ಅಂಚೆ ಮೂಲಕ ಶಿಕ್ಷಣದಲ್ಲಿ ಕೈಗಾರಿಕಾ ಉದ್ಯಮಿಗಳು, ವೈದ್ಯರು, ವ್ಯಾಪಾರಸ್ಥರು, ಗೃಹಿಣಿಯರು, ಸರ್ಕಾರಿ ಅಧಿಕಾರಿಗಳು ಪತ್ರಕರ್ತರು, ಸಾಹಿತಿಗಳು, ಪ್ರಮುಖರು ಭಾಗವಹಿಸಿ ಸಂಸ್ಕೃತವನ್ನು ಕಲಿಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ವ್ಯಾಪಕವಾಗಿ ಸಂಸ್ಕೃತ ಆಸಕ್ತರು ಇರುವ ಕಾರಣ ಸಂಸ್ಕೃತದ ಬಗ್ಗೆ ಅರಿವು ಮೂಡಿಸಲು ನಗರದ ಸಂಸ್ಕೃತ ಭಾರತಿ ಅರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.