ಶಿವಮೊಗ್ಗ : ಸಿ ಟಿ ರವಿ ಇನ್ನೂ ಬಚ್ಚಾ.. ಮೊನ್ನೆ ಮೊನ್ನೆ ಕಣ್ಣು ಬಿಟ್ಟಿದ್ದಾರೆ. ಹಾಗಾಗಿ, ನೆಹರು, ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡುವಾಗ ಇತಿಮಿತಿಯಿಂದ ಮಾತನಾಡಬೇಕು ಎಂದು ಭದ್ರಾವತಿ ಶಾಸಕ ಸಂಗಮೇಶ್ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿ ಇನ್ನೂ ರಾಗಿ ಬಿಸೋದಿದೆ. ಮೋದಿಯವರ ಬಳಿ, ಬಿಜೆಪಿಯವರ ಬಳಿ ಶಬ್ಬಾಸ್ ಗಿರಿ ತೆಗೆದುಕೊಳ್ಳಲು ಇಂತಹ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ. ನೆಹರು ಅವರು ಇದ್ದಾಗ ಸಿ ಟಿ ರವಿ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಈ ದೇಶಕ್ಕೆ ಮೋದಿಯವರು ಮಾಡಿದಷ್ಟು ದ್ರೋಹ ಯಾರೂ ಮಾಡಿಲ್ಲ.
ಇಂದಿರಾ ಗಾಂಧಿ ಅವರು ದೇಶಕ್ಕೆ ಕೊಟ್ಟ 20 ಅಂಶಗಳ ಯೋಜನೆಯ ಬಗ್ಗೆ ಸಿ ಟಿ ರವಿಯವರಿಗೆ ಏನೂ ಗೊತ್ತಿಲ್ಲ. ಹಾಗಾಗಿ, ನೆಹರು ಕುಟುಂಬ, ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡಬಾರದು. ಇದು ಖಂಡನೀಯ ಎಂದರು.
ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಹೆಸರನ್ನು ಇಂದಿರಾ ಕ್ಯಾಂಟೀನ್ನಿಂದ ಬದಲಿಸಿದರೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತದೆ ಎಂದು ಸಂಗಮೇಶ್ ಎಚ್ಚರಿಕೆ ನೀಡಿದ್ದಾರೆ.