ಶಿವಮೊಗ್ಗ: ನಗರದಿಂದ ಚೆನ್ನೈ ಮಹಾನಗರಕ್ಕೆ ವಾರಕ್ಕೊಮ್ಮೆ ಹೋಗುತ್ತಿದ್ದ ಶಿವಮೊಗ್ಗ-ಚೆನ್ನೈ ತತ್ಕಾಲ್ ಎಕ್ಸಪ್ರೆಸ್ ರೈಲು ಇನ್ಮುಂದೆ ವಾರದಲ್ಲಿ ಎರಡು ದಿನ ಸಂಚಾರ ಮಾಡಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ರೈಲು ಸೇವೆ ಫೆಬ್ರವರಿ 28ರಿಂದ ವಾರದಲ್ಲಿ ಎರಡು ದಿನ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಿಂದ ಪ್ರತಿ ಸೋಮವಾರ ಹಾಗೂ ಶುಕ್ರವಾರ ರಾತ್ರಿ 11:55ಕ್ಕೆ ಹೊರಟು ಮರು ದಿನ ಬೆಳಗ್ಗೆ 11:45 ಗಂಟೆಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಚೆನ್ನೈ ಸೆಂಟ್ರಲ್ನಿಂದ ಮಂಗಳವಾರ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಗೆ ಹೊರಟು ಮರು ದಿನ ಬೆಳಗ್ಗೆ 3:55ಕ್ಕೆ ಶಿವಮೊಗ್ಗ ತಲುಪಲಿದೆ.
ಈ ಹಿಂದೆ ಶಿವಮೊಗ್ಗ- ಚೆನ್ನೈ ಹಾಗೂ ಶಿವಮೊಗ್ಗ-ರೇಣುಗುಂಟ ರೈಲು ವಾರದಲ್ಲಿ ಒಂದೇ ಬಾರಿ ಒಟ್ಟಿಗೆ ಸಂಚಾರ ಮಾಡಿದ್ದವು. ಈಗ ವಾರಕ್ಕೆ ಎರಡು ಬಾರಿ ಸಂಚಾರ ಮಾಡಲಿವೆ. ಇದರಿಂದ ಶಿವಮೊಗ್ಗ ಜನತೆ ತಿರುಪತಿ ದರ್ಶನಕ್ಕೆ ಹಾಗೂ ಚೆನ್ನೈ ನಗರಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. ಈ ಮೂಲಕ ಶಿವಮೊಗ್ಗದಿಂದ ಬೆಂಗಳೂರಿಗೆ ಮಾತ್ರ ಸಾಗುತ್ತಿದ್ದ ರೈಲುಗಳು ಈಗ ಬೇರೆ ರಾಜ್ಯಕ್ಕೂ ಸಹ ಸಾಗುತ್ತಿವೆ. ಈಗಾಗಲೇ ತತ್ಕಾಲ್ ರೈಲಿನಲ್ಲಿ ಶೇ. 70ರಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದಾರೆ.
ಸಾರ್ವಜನಿಕರು ಶಿವಮೊಗ್ಗ- ಚೆನ್ನೈ ತತ್ಕಾಲ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮನವಿ ಮಾಡಿದ್ದಾರೆ.