ಮೈಸೂರು: ಮಾರಣಾಂತಿಕ ಹಲ್ಲೆಯ ಚಿಕಿತ್ಸೆ ನಂತರ ತವರು ಮನೆಗೆ ಆಗಮಿಸಿದ ಎನ್. ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಮೈಸೂರು - ಬೆಂಗಳೂರು ರಿಂಗ್ ರೋಡ್ ಬಳಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
ನಂತರ ಉದಯಗಿರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆಯಾಗಿದ್ದೇನೆ, ಆದರೆ, ಧ್ವನಿ ಸರಿಯಾಗಲು ಟ್ರಿಟ್ ಮೆಂಟ್ ಪಡೆಯುತ್ತಿದ್ದೇನೆ ಎಂದರು. ರಾಜ್ಯ ಸರ್ಕಾರ ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಲು ಚಿಂತನೆ ಮಾಡಿದೆ. ಆದರೆ, ನನ್ನ ಮೇಲೆ ಹಲ್ಲೆ ಮಾಡಿದ ಪ್ರಕರಣ ಇನ್ನು ತನಿಖೆ ಹಂತದಲ್ಲಿಯೇ ಇದೆ. ಹಲ್ಲೆ ಮಾಡಿದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ತನಿಖೆ ಪೂರ್ಣಗೊಂಡ ನಂತರ ಗೊತ್ತಾಗಲಿದೆ ಸಂಘಟನೆಗಳ ಬ್ಯಾನ್ ಬಗ್ಗೆ ನಾನು ಏನು ಹೇಳಲು ಸಿದ್ಧವಿಲ್ಲ ಎಂದು ತಿಳಿಸಿದರು.
ಭೂಗತಪಾತಕಿ ರವಿ ಪೂಜಾರಿ, ನನಗೆ ಹಾಗೂ ಸಾ.ರಾ.ಮಹೇಶ್ ಅವರಿಗೆ ಬೆದರಿಕೆ ಹಾಕಿದ್ದ, ಇಬ್ಬರು ದೂರು ನೀಡಿದ್ದೆವು. ರವಿ ಪೂಜಾರಿ ಬಂಧನವಾಗಿರುವುದರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯವಿದೆ ಎಂದರು. ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಬಹಳ ನಿರೀಕ್ಷೆ ಇದೆ. ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.