ಮೈಸೂರು: ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪತ್ರ ಬರೆದು ಆಗ್ರಹಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಶ್ರೀನಿವಾಸ್ ಪ್ರಸಾದ್ ಅವರು, ರೋಪ್ ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿಯಾಗಲಿದೆ.
ಪರಿಸರವಾದಿಗಳು ಅದನ್ನು ವಿರೋಧಿಸುವುದರಲ್ಲಿ ಅರ್ಥವಿದೆ. ಪರಿಸರಕ್ಕೆ ಅಪಾಯವಿರುವ ರೋಪ್ ವೇ ನಿರ್ಮಾಣದ ನಿರ್ಧಾರ ಸೂಕ್ತವಲ್ಲ ಎಂದಿದ್ದಾರೆ. ಬೆಟ್ಟದ ತುದಿ ತಲುಪಲು ಸುಸಜ್ಜಿತ ಮೆಟ್ಟಿಲುಗಳು ಇವೆ. ಬಸ್ ಹಾಗೂ ಇತರೆ ವಾಹನಗಳಿಗೆ ರಸ್ತೆಯಿದೆ. ಇದಲ್ಲದೇ ಇನ್ನೂ ಎರಡು ಕಡೆಗಳಿಂದ ಬೆಟ್ಟ ಹತ್ತಲು ಮಾರ್ಗಗಳಿವೆ. ಕೇವಲ ಅರ್ಧಗಂಟೆಯಲ್ಲಿ ಬೆಟ್ಟದ ತುದಿ ತಲುಪಬಹುದು. ಬೆಟ್ಟವನ್ನೇರಲು ಮಾರ್ಗ ಇರುವುದರಿಂದ ರೋಪ್ವೇ ಅನಗತ್ಯ ಎಂದು ತಿಳಿಸಿದ್ದಾರೆ.
![The letter written by Shreenivas Prasad](https://etvbharatimages.akamaized.net/etvbharat/prod-images/14844731_letter.jpg)
ಕೇವಲ ರೋಪ್ವೇ ಮಾತ್ರವಲ್ಲದೆ, ಬೆಟ್ಟದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸುವುದು ಪರಿಸರ ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವಲ್ಲ. ಭಕ್ತರಿಗೆ ಈಗ ಅಲ್ಲಿ ನೀಡಿರುವ ಮೂಲಸೌಕರ್ಯ ಸಾಕೆನಿಸುತ್ತದೆ. ಇನ್ನಷ್ಟು ಸೌಲಭ್ಯ ಅನಿವಾರ್ಯ ಎನಿಸಿದರೆ, ಪರಿಸರಸ್ನೇಹಿ ವಿಧಾನದಲ್ಲಿ ಒದಗಿಸಿ ಎಂದು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ವರ್ಕೌಟ್ ಸಮಯದಲ್ಲೇ ಕುಸಿದು ಬಿದ್ದ ಮಹಿಳೆ.. ಕ್ಷಣಾರ್ಧದಲ್ಲೇ ಹಾರಿಹೋಯ್ತು ಪ್ರಾಣ! ವಿಡಿಯೋ