ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಸಿದ್ಧತೆ ಪೂರ್ಣ.. - ನಂಜನಗೂಡು ಪಂಚ ರಥೋತ್ಸವ
ದಕ್ಷಿಣಕಾಶಿ ಎಂತಲೇ ಖ್ಯಾತಿ ಪಡೆದಿರುವ ನಂಜನಗೂಡಿನಲ್ಲಿ ನಾಳೆ ನಡೆಯಲಿರುವ ದೊಡ್ಡಜಾತ್ರೆಗೆ ನಂಜನಗೂಡು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ದೊಡ್ಡಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ನಂಜನಗೂಡು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನಾಳೆ ಮುಂಜಾನೆ 3.30 ರಿಂದ 4.30 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪಂಚಮಹಾರಥೋತ್ಸವ ನೆರವೇರಲಿದ್ದು, ಶ್ರೀಕಂಠೇಶ್ವರ ಉತ್ಸವಮೂರ್ತಿಯನ್ನ ಹೊತ್ತುಸಾಗಲಿರುವ 96 ಅಡಿ ಎತ್ತರದ ಬೃಹತ ರಥ ಸಿದ್ಧವಾಗಿದೆ ಎಂದು ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ತಿಳಿಸಿದ್ದಾರೆ.
ಎರಡು ವರ್ಷಗಳ ನಂತರ ನಡೆಯುತ್ತಿರುವ ಅದ್ಧೂರಿ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚಕೆ ಕ್ರಮ ಕೈಗೊಳ್ಳಲಾಗಿದೆ.
ಪ್ರಧಾನ ಅರ್ಚಕ ನಾಗಚಂದ್ರ ಧೀಕ್ಷಿತ್ ಅವರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಒಂದು ದಿನ ಮುಂಚಿತವಾಗಿಯೇ ಈಗಾಗಲೇ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ದೇವಾಲಯದ ಮೊಗಸಾಲೆ ಹೊರ ಆವರಣ ಸೇರಿದಂತೆ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಬೀಡುಬಿಟ್ಟಿದ್ದಾರೆ.
ಬರುವ ಎಲ್ಲಾ ಭಕ್ತರಿಗೆ ತಾಲೂಕು ಆಡಳಿತ ಹಾಗೂ ದೇವಾಲಯದ ವತಿಯಿಂದ ಕುಡಿಯುವ ನೀರು, ಶೌಚಾಲಯ ಆರೋಗ್ಯ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮಾ.18ಕ್ಕೆ ಉತ್ಸವಕ್ಕೆ ತೆರೆ.. ಪಂಚಮಹಾರಥೋತ್ಸವದ ಪ್ರಮುಖ ಕೇಂದ್ರ ಬಿಂದುವಾಗಿರುವ ಬೃಹತ್ ರಥವನ್ನು ಈಗಾಗಲೇ ಸಿಂಗರಿಸಲಾಗಿದೆ. ದೊಡ್ಡಜಾತ್ರೆ ಅಂಗವಾಗಿ ಮಾರ್ಚ್ 9 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾರ್ಚ್ 16 ರಂದು ಪಂಚಮಹಾರಥೋತ್ಸವ ನೆರವೇರಲಿದೆ. ಮಾರ್ಚ್ 18ರ ಸಂಜೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗುವ ಮೂಲಕ ದೊಡ್ಡಜಾತ್ರೆ ಸಂಭ್ರಮಕ್ಕೆ ತೆರೆಬೀಳಲಿದೆ.
ಇದನ್ನೂ ಓದಿ: ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ: ಮೈಸೂರು, ಕೊಪ್ಪಳದಲ್ಲಿ 144 ಸೆಕ್ಷನ್ ಜಾರಿ