ಮೈಸೂರು: ಮಹಾತ್ಮ ಗಾಂಧೀಜಿಯವರ ವಿರುದ್ಧ ಮಾತನಾಡುವವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಬಿಜೆಪಿ ಪಕ್ಷಕ್ಕೆ ದುಡ್ಡು ಕೊಡಲು ಆಗಲಿಲ್ಲವಾದರೆ ಹೇಳಿ ಕಾಂಗ್ರೆಸ್ ಪಕ್ಷ ನೀಡುತ್ತೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಂಸದ ಅನಂತಕುಮಾರ್ ಹೆಗಡೆ ಹುಚ್ಚನ ರೀತಿ ಮಾತನಾಡುತ್ತಿದ್ದಾರೆ. ಅವನೊಬ್ಬ ಹುಚ್ಚುಹುಚ್ಚಾಗಿ ಮಾತನಾಡುವ ಸಂಸದ. ಹೆಗಡೆ ಸೇರಿದಂತೆ ಅನೇಕ ಬಿಜೆಪಿಗರು ಮಹಾತ್ಮ ಗಾಂಧೀಜಿ ಅವರ ಬಗ್ಗೆ ಮಾತನಾಡಿದ್ದಾರೆ. ಇತಿಹಾಸ ತಿಳಿಯದೇ ಏನೇನೋ ಮಾತನಾಡುತ್ತಾರೆ. ಮೊದಲು ಇಂತವರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ. ಬಿ. ಜೆ. ವಿಜಯಕುಮಾರ್ ಮಾತನಾಡಿ, ಸಂವಿಧಾನ ಹಾಗೂ ಮಹಾತ್ಮರ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಪ್ರಚೋದನಕಾರಿ ಹೇಳಿಕೆ ವಿರುದ್ಧ ನಾಳೆ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಪ್ರಯೋಜನವಿಲ್ಲ. ಕಾರ್ಪೋರೇಟರ್ ಸೆಕ್ಟರ್ಗೆ ಅನುಕೂಲವಾಗಲಿದೆ ಎಂದು ಟೀಕಿಸಿದರು.