ಮೈಸೂರು: ಅಕ್ಟೋಬರ್ ಬಂತು ಎಂದರೆ ಮೈಸೂರು ಜನತೆಗೆ ಏನೋ ಸಂಭ್ರಮ. ಏಕೆಂದರೆ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ದಸರಾ ಹಬ್ಬ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಾವಳಿಯಿಂದ ದಸರಾ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ದಸರಾ ಆಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್, ದಸರಾದಲ್ಲಿ ಅಂತಾರಾಷ್ಟ್ರೀಯ ಕಲಾವಿದರ ಬದಲು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ನಮಗೆ ದಸರಾ ಬೇಕು. ಆದರೆ ದಸರಾ ಆಚರಣೆ ಸ್ವರೂಪ ಬದಲಾಗಬೇಕು. ದಸರಾ ಕೇವಲ ಮನರಂಜನೆಗೆ ಸೀಮಿತವಾಗಿರಬಾರದು. ಅರ್ಥಪೂರ್ಣ ಸಡಗರದಿಂದ ಕೂಡಿರಬೇಕು ಎಂದರು.
![Mandya Ramesh reaction about dasara](https://etvbharatimages.akamaized.net/etvbharat/prod-images/kn-mys-02-dasara-mandyaramesh-vis-ka10003_03092020133948_0309f_01036_983.jpg)
ದೇಶೀಯ ಸಂಸ್ಕೃತಿ, ಕಲೆ ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಿ. ಇದರಿಂದ ಕೊರೊನಾ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ಅನುಕೂಲವಾಗಲಿದೆ. ದಸರಾ ಅರಮನೆ ಆವರಣಕ್ಕೆ ಸೀಮಿತವಾದರೂ ಅಲ್ಲೇ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ಈ ಬಾರಿ ದಸರಾ ಕಲೆ, ಸಂಸ್ಕೃತಿ ಉಳಿಸುವ ಅಪರೂಪದ ದಸರಾ ಆಗಲಿ. ಮನರಂಜನೆ, ಸಾಂಸ್ಕೃತಿಕ ಪದಗಳಿಗೆ ವ್ಯತ್ಯಾಸ ಇದೆ. ಇನ್ನು ಮುಂದಾದರೂ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ದಸರಾ ಆಚರಣೆ ಆಗಲಿ ಎಂದು ಮಂಡ್ಯ ರಮೇಶ್ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.