ಮೈಸೂರು : ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಂತೆ ಕೂಲಿ ಕಾರ್ಮಿಕರ ಬದುಕೂ ಕೂಡಾ ಬೀದಿಗೆ ಬಂದಿದೆ. ಊಟಕ್ಕೂ ಅವರೀಗ ಪರದಾಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಮೈಸೂರಿಗೆ ಬಂದಿದ್ದ ಕಾರ್ಮಿಕರು ಲಾಕ್ಡೌನ್ನಿಂದ ಕಂಗಾಲಾಗಿದ್ದು, ಅವರಿಗೆ ವಸತಿ ಶಿಬಿರಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ಅಸ್ಸೋಂ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 6 ಸಾವಿರಕ್ಕೂ ಹೆಚ್ಚು ಕಟ್ಟಡಗಳ ಕಾರ್ಮಿಕರು, ಪೇಂಟರ್ಗಳು, ಅಲ್ಯೂಮಿನಿಯಂ ಕೆಲಸ ಮಾಡುವವರು ಲಾಕ್ಡೌನ್ನಲ್ಲಿ ಸಿಲುಕಿದ್ದಾರೆ. ಕೈಗಾರಿಕಾ ಪ್ರದೇಶಗಳಾದ ಹೆಬ್ಬಾಳ, ತಾಂಡವಪುರ, ಕಡಕೋಳ ಸೇರಿ ಹಲವೆಡೆ ಇವರು ಕೆಲಸ ಮಾಡುತ್ತಿದ್ದರು. ಈಗ ಇವರಿಗಾಗಿ 10ಕ್ಕೂ ಹೆಚ್ಚು ಪುನರ್ವಸತಿ ಶಿಬಿರಗಳನ್ನು ಜಿಲ್ಲಾಡಳಿತ ಸ್ಥಾಪಿಸಿ ವಸತಿ, ಊಟ ಹಾಗೂ ಮನರಂಜನೆಗೆ ವ್ಯವಸ್ಥೆ ಮಾಡಿದೆ.
ಹೊರ ರಾಜ್ಯದ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಜಿಲ್ಲಾಡಳಿತದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅದರಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಹುಡುಕಿಕೊಂಡು ಬಂದವರು ಸಹ ಸೇರಿದ್ದಾರೆ.
ಮೈಸೂರಿನ ಬನ್ನಿಮಂಟಪದ ಬಳಿಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ನೂರಾರು ಕುಟುಂಬಗಳು ಕೂಲಿಯನ್ನೇ ನೆಚ್ಚಿಕೊಂಡಿವೆ. ಲಾಕ್ಡೌನ್ನಿಂದಾಗಿ ಕೂಲಿಗೂ ಕನ್ನ ಬಿದ್ದಿದ್ದು, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೂ ಯಾವ ಅಧಿಕಾರಿಗಳೂ ಕೂಡಾ ಇಲ್ಲಿಗೆ ಬರದೇ ಇರೋದ್ರಿಂದ ಚಿಂತೆ ಆವರಿಸಿದೆ. ಜಿಲ್ಲಾಡಳಿತ ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ನಾನಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡಾ ಇವರಿಗೆ ಅಗತ್ಯ ಸೌಕರ್ಯ ತಲುಪುತ್ತಿಲ್ಲ.
ಮೈಸೂರು ತಾಲೂಕಿನ ಧನಗಹಳ್ಳಿ ವ್ಯಾಪ್ತಿಗೆ ಬರುವ ಚುಂಚನಗೂಡಿನಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜಲವಾಹಿ ಮೈಸೂರು ಟವರ್ ಏರ್ಫೋರ್ಸ್ ಅಂಡ್ ನಾವೆಲ್ ಹೌಸಿಂಗ್ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ಬಂದಿದ್ದ ಬಿಹಾರ್ನ 29, ಜಾರ್ಖಂಡ್ನ 27, ಪಶ್ಚಿಮ ಬಂಗಾಳದ 13, ಒಡಿಶಾದ 30, ಉತ್ತರಪ್ರದೇಶದ 12, ಅಸ್ಸೋಂನ 8 ಮಹಿಳೆಯರು ಸೇರಿದಂತೆ 126 ಮಂದಿ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಅಸಂಘಟಿತ ಕಾರ್ಮಿಕರು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಜಿಲ್ಲಾಡಳಿತ ಹಾಗೂ ವಲಯ ಸಂಘ-ಸಂಸ್ಥೆಗಳು ನೆರವು ನೀಡುತ್ತಿವೆ.