ಮೈಸೂರು: ಪ್ರಾಣಿಗಳನ್ನು ಪಾಲನೆ ಮಾಡುವವರು ಕೋವಿಡ್ ಸೋಂಕಿತರಾದಾಗ ಅವರು ಪ್ರಾಣಿಗಳ ಬಳಿ ಹೋದರೆ ಅವುಗಳಿಗೂ ಸೋಂಕು ಹರಡಬಹುದು ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಈಟಿವಿ ಭಾರತ್ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಇತ್ತೀಚಿಗೆ ಹೈದರಾಬಾದ್ ಮೃಗಾಲಯ ಸೇರಿದಂತೆ ಹಲವು ಕಡೆಯ ಮೃಗಾಲಯಗಳಲ್ಲಿ ಪ್ರಾಣಿಗಳಿಗೂ ಕೊರೊನಾ ಬಂದಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅವರನ್ನು ಸಂದರ್ಶನ ಮಾಡಿದಾಗ, ರಾಜ್ಯದಲ್ಲಿ ಇರುವ ಎಂಟು ಮೃಗಾಲಯಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗಿಲ್ಲ. ಕರ್ನಾಟಕದಲ್ಲಿ 5 ಮೃಗಾಲಯಗಳಲ್ಲಿ ಸಿಂಹ, ಚಿರತೆ, ಹುಲಿ ಸೇರಿದಂತೆ ಇತರ ಮಾಂಸಾಹಾರಿ ಪ್ರಾಣಿಗಳಲ್ಲಿ ಇಲ್ಲಿಯವರೆಗೂ ಕೋವಿಡ್ ಗುಣಲಕ್ಷಣಗಳು ಕಂಡುಬಂದಿಲ್ಲ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸೆಂಟ್ರಲ್ ಝೂ ಅಥಾರಿಟಿ, ರಾಜ್ಯ ಸರ್ಕಾರ ಹಾಗೂ ಐವಿಆರ್ಐ (IVRI) ಗೈಡ್ ಲೈನ್ಸ್ ಪ್ರಕಾರ ಪ್ರತಿಯೊಂದು ಮೃಗಾಲಯದ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಿ, ದೂರದಿಂದಲೇ ಅವುಗಳಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 46 ವರ್ಷ ಮೇಲ್ಪಟ್ಟ ಎಲ್ಲ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಲಾಗಿದೆ.
ಮಾಂಸಾಹಾರಿ ಪ್ರಾಣಿಗಳಿಗೆ ಅದರ ಆಹಾರವನ್ನು ಬಿಸಿ ನೀರಿನಿಂದ ತೊಳೆದು ಹಾಕಲಾಗುತ್ತಿದ್ದು, ರಾಜ್ಯ 8 ಮೃಗಾಲಯಗಳಲ್ಲಿ ಯಾವುದೇ ಯಾವುದೇ ಪ್ರಾಣಿಗಳಲ್ಲಿ ಕೋವಿಡ್ ಲಕ್ಷಣ ಕಂಡು ಬಂದಿಲ್ಲ. ಒಂದು ವೇಳೆ ಪ್ರಾಣಿಗಳಲ್ಲಿ ಕೊರೊನಾದ ಗುಣಲಕ್ಷಣಗಳು ಕಂಡು ಬದಲ್ಲಿ, ಊಟ ಬಿಡುವುದು, ಜ್ವರ, ಕೆಮ್ಮು, ಹಾಗೂ ಪ್ರಾಣಿಯು ಮೌನವಾಗಿವ ಗುಣಲಕ್ಷಣಗಳು ಗೋಚರವಾಗುತ್ತವೆ.
ಅಲ್ಲದೇ, ಹಾರೈಕೆ ಮಾಡುವ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದ್ದರೆ ಆ ಪ್ರಾಣಿಗೂ ಸಹ ಸೋಂಕು ಹರಡುತ್ತದೆ. ಆದರೆ, ಪ್ರಾಣಿಗೆ ಕೋವಿಡ್ ಲಕ್ಷಣಗಳು ಇದ್ದರೆ ಅದು ಮನುಷ್ಯನಿಗೆ ಹರಡುವುದಿಲ್ಲ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ. ಈ ಟಿವಿ ಭಾರತ್ಗೆ ತಿಳಿಸಿದರು.