ಮೈಸೂರು: ಹೆಚ್.ವಿಶ್ವನಾಥ್ ಬಿಜೆಪಿ ಸಿದ್ಧಾಂತ ಅರಿತು ನಡೆಯುವುದು ಒಳಿತು. ಕೃತಜ್ಞತೆ ಇರುವುದರಿಂದಲೇ ಎಂಎಲ್ಸಿ ಮಾಡಿರೋದು ಎಂದು ಶಾಸಕ ಎಲ್.ನಾಗೇಂದ್ರ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬಂದ 17 ಮಂದಿಯಲ್ಲಿ ಎಲ್ಲರೂ ಪಕ್ಷದ ಸಿದ್ಧಾಂತದಂತೆ ನಡೆಯುತ್ತಿದ್ದಾರೆ. ವಿಶ್ವನಾಥ್ ಅವರು ತಾಳ್ಮೆ ವಹಿಸೋದು ಒಳಿತು. ವಿಶ್ವನಾಥ್ಗೆ ಮಂತ್ರಿ ಸ್ಥಾನ ನೀಡಲು ಯಾರ ವಿರೋಧವೂ ಇಲ್ಲ. ಅನವಶ್ಯಕವಾಗಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳು ತರವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ - ಬಿಜೆಪಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿ, ಪರಿಷತ್ ಮೈತ್ರಿಯಂತೆ ಪಾಲಿಕೆಯಲ್ಲೂ ಹೊಂದಾಣಿಕೆ ಸಾಧ್ಯತೆ ಇದೆ. ಈ ಬಾರಿ ಬಿಜೆಪಿ ಮೇಯರ್ ಸ್ಥಾನ ಪಡೆಯಲಿದೆ. ಕಡಿಮೆ ಸದ್ಯರಿದ್ದರೂ ಪರಿಷತ್ನಲ್ಲಿ ಸಭಾಪತಿ ಸ್ಥಾನ ಬಿಟ್ಟು ಕೊಟ್ಟಿದ್ದೇವೆ. ಆದ್ರೆ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ ಬಿಜೆಪಿ ಮೇಯರ್ ಹುದ್ದೆ ಪಡೆಯಬೇಕೆಂಬುದು ಬಹಳ ದಿನಗಳ ಬಯಕೆಯಾಗಿದೆ ಎಂದರು.
ಇದನ್ನೂ ಓದಿ: ಮೈಸೂರು ಮಹಾರಾಜರ ಬಗ್ಗೆ ಹಗುರ ಮಾತು: ಕ್ಷಮೆಯಾಚಿಸಿದ ಅಪ್ಪಣ್ಣ
ಜೆಡಿಎಸ್ನಲ್ಲಿ ಸಾ.ರಾ.ಮಹೇಶ್, ಜಿಟಿಡಿ ಬಣ ರಾಜಕೀಯ ಹಿನ್ನೆಲೆಯಲ್ಲಿ ಮಾತನಾಡಿ, ಪಾಲಿಕೆ ಚುನಾವಣೆ ಮೇಲೆ ಬಣ ರಾಜಕೀಯ ಪರಿಣಾಮ ಬೀರದು. ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡ್ರೆ ಇವರು ಕೇಳಲೇಬೇಕು. ಮೀಸಲಾತಿ ಪ್ರಕಟವಾದ ಬಳಿಕ ಎರಡೂ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಮೈಸೂರು ಉಸ್ತುವಾರಿ ಸಚಿವ ಸ್ಥಾನ ಬದಲಾಗಲ್ಲ. ಎಸ್.ಟಿ.ಸೋಮಶೇಖರ್ ಅವರೇ ಮುಂದುವರೆಯಲಿದ್ದಾರೆ. ಬದಲಾವಣೆ ಮಾಡುವುದಿದ್ರೆ ಇಷ್ಟೊತ್ತಿಗೆ ಮಾಡ್ಬೇಕಿತ್ತು. ಅವರು ಎಲ್ಲರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.