ದಕ್ಷಿಣ ಕನ್ನಡ: ಪ್ರಸಿದ್ಧ ಪುಣ್ಯಕ್ಷೇತ್ರ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಮರಕತ ಶ್ರೀ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿ ಮತ್ತು ಊರ ಭಕ್ತಾಧಿಗಳ ನೆರವಿನಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹಾದ್ವಾರವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಸಚಿವ, ನೀರಿನ ಸಮೃದ್ಧತೆ ಇರುವ ದೇವಳಗಳಲ್ಲಿ ಮೀನುಗಳ ಸಂರಕ್ಷಣೆಗಾಗಿ ಬೃಹತ್ ಮತ್ಸ್ಯಾಗಾರ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ಸ್ಯ ಪ್ರಭೇದಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸಮೃದ್ಧ ನೀರಿನ ವ್ಯವಸ್ಥೆ ಇರುವ ದೇವಳಗಳ ಪರಿಸರದಲ್ಲಿ ಶ್ರೇಷ್ಠ ಮಟ್ಟದ ಮತ್ಸ್ಯಾಗಾರ ನಿರ್ಮಾಣ ಮಾಡುವ ಚಿಂತನೆಯಿದೆ. ಈ ಮೂಲಕ ಮತ್ಸ್ಯಗಳ ಸಂರಕ್ಷಣೆ ಹಾಗೂ ಆಗಮಿಸುವ ಭಕ್ತರಿಗೆ ಮೀನುಗಳ ಬಗ್ಗೆ ಜ್ಞಾನ ತಿಳಿಸುವ ವಿನೂತನ ಯೋಜನೆ ಸಿದ್ಧಪಡಿಸಲಾಗುವುದು.

ದೇವಾಲಯಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ ಸಾಧ್ಯ. ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಪಾಸನಾ ಸಮಿತಿ ರಚಿಸಿಕೊಂಡು ದೇವಳದ ಅಭಿವೃದ್ಧಿಗೆ ಕಂಕಣ ತೊಟ್ಟಿರುವುದು ಮಾದರಿ ಕಾರ್ಯ. ಗ್ರಾಮೀಣ ದೇವಳಗಳಲ್ಲಿ ಕುಡಿಯುವ ನೀರು ಮತ್ತು ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಶೀಘ್ರ ಪ್ರಗತಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಇನ್ನು, ಮರಕತ ದೇವಳ ಮತ್ತು ಯೇನೆಕಲ್ಲು ಶಂಖಪಾಲ ದೇವಳಗಳ ಸಂಪರ್ಕ ರಸ್ತೆಗೆ ತೂಗು ಸೇತುವೆ ಬೇಕೆಂಬ ಬೇಡಿಕೆಯಿತ್ತು. ಆದರೆ, ತೂಗು ಸೇತುವೆಯ ಬದಲು ಈ ಪ್ರದೇಶದಲ್ಲಿ ಬೃಹತ್ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ, ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯವಸ್ಥಿತಗೊಳಿಸಲಾಗುವುದು. ಈ ಮೂಲಕ ಅವಳಿ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಂಪರ್ಕ ವ್ಯವಸ್ಥೆ ಲಭಿಸುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 12 ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿದ್ದು, ಅವುಗಳ ಬೃಹತ್ ಕಿಂಡಿ ಅಣೆಕಟ್ಟು ಮರಕತದಲ್ಲಿ ನಿರ್ಮಿತವಾಗಿದೆ. ಅಲ್ಲದೇ ಮರಕತದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಓದಿ: ಕಪ್ಪತಗುಡ್ಡದ 200 ಹೆಕ್ಟೇರ್ ಪ್ರದೇಶ ಬೆಂಕಿಗಾಹುತಿ: ಕಿಡಿಗೇಡಿಗಳ ವಿರುದ್ಧ ಸಮರ ಸಾರಿದ ಅರಣ್ಯ ಇಲಾಖೆ