ಮಂಗಳೂರು: ನಗರದಲ್ಲಿರುವ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿಯು ಕುಂಠಿತಗೊಂಡು ಉದ್ಘಾಟನೆಗೊಳ್ಳದ ಕಾರಣ ಕಾಂಗ್ರೆಸ್ ನಿಂದ ಇಂದು ಸಂಜೆ ಅಣಕು ಉದ್ಘಾಟನೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಮುಖವಾಡ ಧರಿಸಿ, ಪ್ರತಿಕೃತಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.
ಈ ಸಂದರ್ಭ ನಳಿನ್ ಕುಮಾರ್ ಕಟೀಲು ಅವರಿಗೆ ಪ್ರತಿಭಟನಾಕಾರರು ಛೀಮಾರಿ, ಘೋಷಣೆಗಳನ್ನು ಕೂಗಿ ಈರುಳ್ಳಿಯ ಮಾಲೆ ಹಾಕಿ, ಹಗ್ಗವನ್ನು ಕತ್ತರಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಅವರ ಪ್ರತಿಕೃತಿಗಳನ್ನು ಮೇಲ್ಸೇತುವೆಯ ಕೆಳಗೆ ಎಸೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ಗೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಡಿಸೆಂಬರ್ ಅಂತ್ಯದ ವೇಳೆಯಲ್ಲಿಯೂ ಪೂರ್ಣಗೊಳ್ಳದ ಕಾರಣ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಇಂದು ಅಣಕು ಉದ್ಘಾಟನೆ ನಡೆಸಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಐವನ್ ಡಿಸೋಜ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಪಂಪ್ ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ ನೆರವೇರಿಸಿತು.