ಮಂಗಳೂರು: ಕೋಡಿಕೆರೆ ಮನೋಜ್ ಸೇರಿದಂತೆ ನಾಲ್ವರು ರೌಡಿಶೀಟರ್ಗಳ ಕೊಲೆಗೆ ಯೋಜನೆ ರೂಪಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿಶೀಟರ್ ಆಕಾಶಭವನ ಶರಣ್ ನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಆಕಾಶಭವನ ಶರಣ್ ನನ್ನು ಮಂಗಳೂರು ಪೊಲೀಸ್ ವಶಕ್ಕೆ ನೀಡಲಾಗಿದೆ. ಒಂದು ವಾರಗಳ ಕಾಲ ತನಿಖೆ ನಡೆಸಲಾಗುತ್ತದೆ. ಅಲ್ಲದೇ, ಆಕಾಶ್ನಿಗೆ ಸಂಬಂಧಪಟ್ಟ ಡೀಲ್ ಗಳನ್ನು ಆತನ ಅನುಪಸ್ಥಿತಿಯಲ್ಲಿ ಅವನ ತಮ್ಮ ಧೀರಜ್ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ಅವನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗುತ್ತಿದೆ.
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆಕಾಶಭವನ ಶರಣ್ ಮೇಲೆ 21 ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿದ್ದಾನೆ. ಈ ಎಲ್ಲ ಪ್ರಕರಣಗಳನ್ನು ಆತ ಜೈಲಿನೊಳಗಿದ್ದೇ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಮಾ.17ರಂದು ಎರಡು ದರೋಡೆ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ 9ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇದಕ್ಕಿಂತ ಹಿಂದೆ ಡಿಸಿಪಿ ಹರಿರಾಂ ಶಂಕರ್ ತಲಪಾಡಿಯಲ್ಲಿ ಮರಳು ಸಾಗಾಟದ ಲಾರಿಯೊಂದನ್ನು ತಡೆದು ಪರಿಶೀಲನೆ ನಡೆಸಿದ್ದರು.
ಆ ಸಂದರ್ಭದಲ್ಲಿ ಅದರಲ್ಲಿ ಓರ್ವ ಚಂದ್ರಹಾಸ ಪೂಜಾರಿ ಎಂಬ ರೌಡಿಶೀಟರ್ ಪತ್ತೆಯಾಗಿದ್ದ. ರೌಡಿಶೀಟರ್ ಚಂದ್ರಹಾಸ ಪೂಜಾರಿ ಹಾಗೂ ದರೋಡೆ ಪ್ರಕರಣದ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಇವರೆಲ್ಲರೂ ಕುಖ್ಯಾತ ರೌಡಿಶೀಟರ್ ಆಕಾಶಭವನ ಶರಣ್ ಎಂಬಾತನ ಸಹಚರರು ಎಂದು ತಿಳಿದು ಬಂದಿತ್ತು ಎಂದರು.
ಇವರು ಗ್ಯಾಂಗ್ ರಚಿಸಿ ಹಫ್ತಾ ವಸೂಲಿ ಮಾಡುತ್ತಿದ್ದರು. ಇವರುಗಳು ತಮಗೆ ರೌಡಿಪಟ್ಟ ದೊರಬೇಕೆಂದು ಪ್ರದೀಪ್ ಮೆಂಡನ್, ಮಂಕಿಸ್ಟ್ಯಾಂಡ್ ವಿಜಯ್, ಗೌರೀಶ್ ಕೋಡಿಕೆರೆ ಮನೋಜ್ ಈ ನಾಲ್ವರಲ್ಲಿ ಓರ್ವನನ್ನು ಕೊಲೆ ಮಾಡಬೇಕೆಂದು ಸ್ಕೆಚ್ ಹಾಕಿದ್ದರು.
ಈ ಕೊಲೆ ನಡೆಸಲು ಎರಡು ಬೈಕ್ಗಳು ಬೇಕೆಂದು ಬೈಕ್ ದರೋಡೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪ್ರಕರಣದಲ್ಲಿ ಇನ್ನು ಯಾರಾದರೂ ಆರೋಪಿಗಳಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಶಶಿಕುಮಾರ್ ಎನ್. ಹೇಳಿದರು.