ಬೆಳ್ತಂಗಡಿ: ಕಳೆದ ರಾತ್ರಿಯಿಂದ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ನೆರೆ ಮತ್ತೊಮ್ಮೆ ಮರುಕಳಿಸಬಹುದೇ ಎನ್ನುವ ಆತಂಕದಲ್ಲಿ ಜನರಿದ್ದಾರೆ.
ಚಾರ್ಮಾಡಿಯ ಅಂತರ ಎಂಬಲ್ಲಿ ಸಂಪರ್ಕ ಸೇತುವೆ ಕಡಿತಗೊಂಡಿದೆ. ಅಲ್ಲದೆ ಮಂಗಳೂರು-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದು, ಆ.7 ರಿಂದ 11 ನೇ ತಾರೀಖಿನವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಶಿಶಿಲ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಸೇತುವೆಯಲ್ಲಿ ಸಿಲುಕಿಕೊಂಡಿರುವ ಮರ, ಕಸಕಡ್ಡಿಗಳನ್ನು ಜೆಸಿಬಿ ಮೂಲಕ ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುತ್ತಿದೆ.