ಮಂಗಳೂರು: ವಿವಾಹವಾಗುವೆನೆಂದು ನಂಬಿಸಿ ದೈಹಿಕ ಸಂಪರ್ಕದ ಬಳಿಕ ವಂಚನೆಗೈದ ಆರೋಪಿಯನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಅರುಣ್ ರಾಜ್ ಕಾಪಿಕಾಡ್(39) ಬಂಧಿತ ಆರೋಪಿ. ಅರುಣ್ ರಾಜ್ ಕಾಪಿಕಾಡ್ ಕಳೆದ ಡಿಸೆಂಬರ್ನಲ್ಲಿ ನಗರದ ಹೋಟೆಲೊಂದಕ್ಕೆ ಯುವತಿಯನ್ನು ಕರೆತಂದಿದ್ದ. ಅಲ್ಲಿ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಬಳಿಕ ಮದುವೆಯಾಗುತ್ತೇನೆ, ಈ ವಿಚಾರ ಯಾರಲ್ಲೂ ಹೇಳಬಾರದು ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದಾದ ಬಳಿಕ ಮದುವೆಯಾಗುವ ಭರವಸೆ ನೀಡಿ ತನ್ನ ಫ್ಲ್ಯಾಟ್ನಲ್ಲಿಯೂ ದೈಹಿಕ ಸಂಪರ್ಕ ಬೆಳೆಸಿದ್ದು, ಪರಿಣಾಮ ಯುವತಿ ಗರ್ಭಿಣಿಯಾಗಿದ್ದಾಳೆ. ಆ ಬಳಿಕ ಆಕೆಗೆ ಗರ್ಭಪಾತ ಮಾಡಿಸಿ, ಬಳಿಕ ವಿವಾಹವಾಗದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯುವತಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ: ಪೊಲೀಸರಿಂದ ಏಟು ತಿಂದ ಬಾಲಕ ಸಾವು