ಮಂಗಳೂರು: ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಿವೆ ಎಂದು ಬಿಜೆಪಿಯ ಜನಪ್ರತಿನಿಧಿಗಳ ಮೇಲಿರುವ ಪ್ರಕರಣಗಳನ್ನು ರಾಜ್ಯ ಕಾನೂನು ಸಚಿವರು ಖುಲಾಸೆ ಮಾಡಿದ್ದಾರೆ. ಹಾಗಾದರೆ ಅವರು ಜನಸಾಮಾನ್ಯರ ಮೇಲಿರುವ ಪ್ರಕರಣಗಳನ್ನು ತೆಗೆದುಹಾಕಲಿ. ಬಿಜೆಪಿಯ ಎಂಪಿ, ಎಂಎಲ್ಎಗಳಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಪ್ರಶ್ನಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇಂದಿನ ಜನಪ್ರತಿನಿಧಿಗಳಿಗೆ ಯಾವ ಕಾನೂನುಗಳು ಅನ್ವಯವಾಗುವುದಿಲ್ಲ. ಕ್ರಿಮಿನಲ್ ಕೇಸ್ ದಾಖಲಾಗಿದ್ದರೆ ಅದರ ತನಿಖೆಯೇ ಇಲ್ಲ. ಅವರೇ ವ್ಯವಸ್ಥೆ ಮಾಡಿ, ಅವರೇ ಖುಲಾಸೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಇತರರ ಟೀಕೆ ಮೀರಿ ನಿಲ್ಲುವ ವ್ಯಕ್ತಿತ್ವವುಳ್ಳವರಾಗಿರಬೇಕು. ಅವರ ಮೇಲೆ ಪ್ರಕರಣ ದಾಖಲಾದರೆ, ನ್ಯಾಯಾಲಯದಲ್ಲಿ ನಿರಪರಾಧಿಗಳೆಂದು ಸಾಧಿಸಿ ಆದರ್ಶಪ್ರಾಯರಾಗಬೇಕು ಎಂದರು.
ಸಾರ್ವಜನಿಕ ಹಿತಾಸಕ್ತಿಯಲ್ಲಿ ನಿರತರಾಗಿರುವ ಜನಪ್ರತಿನಿಧಿಗಳ ಮೇಲಿರುವ ಪ್ರಕರಣಗಳನ್ನು ಖುಲಾಸೆ ಮಾಡುವುದರಲ್ಲಿ ತಪ್ಪಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕೆಲಸದ ಒತ್ತಡಗಳು ಜಾಸ್ತಿಯಿದೆ. ಆದ್ದರಿಂದ ಈ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಮಾಧುಸ್ವಾಮಿಯವರು ಸಮರ್ಥನೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿದ್ದು, ಯಾವಾಗ ರಾಜ್ಯಾಂಗದ ವ್ಯವಸ್ಥೆ ನ್ಯಾಯಾಂಗವನ್ನು ಗೌರವಿಸುವುದಿಲ್ಲವೋ, ಅಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಗೂಂಡಾರಾಜ್ಯ ಸ್ಥಾಪನೆಯಾಗುತ್ತದೆ. ಹೀಗೆ ಆದಲ್ಲಿ ಜನಸಾಮಾನ್ಯರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ರಾಜಕೀಯ ಪಕ್ಷಗಳನ್ನು ಸೇರುತ್ತಾರೆ. ಎಲ್ಲಾ ಪ್ರಕರಣಗಳನ್ನು ಖುಲಾಸೆ ಮಾಡಿಸಿ, ರಾಜಾರೋಷವಾಗಿ ತಿರುಗಾಡುತ್ತಾರೆ. ಇದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯೇ ಎಂದು ಪ್ರಶ್ನಿಸಿದರು.
ಯಾವುದೇ ಸರ್ಕಾರವಿರಲಿ ನಮ್ಮಲ್ಲಿ ಸ್ವತಂತ್ರ ನ್ಯಾಯಾಲಯವಿದ್ದು, ಅದರಲ್ಲಿ ಪ್ರಕರಣಗಳು ತನಿಖೆಯಾಗಲಿ. ತಪ್ಪಿಲ್ಲದಿದ್ದಲ್ಲಿ ನಿರಪರಾಧಿಯಾಗಿ ಹೊರಬರಲಿ. ಸರ್ಕಾರದ ಇಲಾಖೆ, ತಜ್ಞರು ಬೇಡ ಎಂದರೂ ಸಚಿವ ಸಂಪುಟದ ಉಪಸಮಿತಿ ಮಾಡಿ ಸಚಿವರುಗಳೇ ಸೇರಿ ಪ್ರಕರಣಗಳನ್ನು ಖುಲಾಸೆ ಮಾಡುವುದಾದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಎತ್ತಕಡೆ ಹೋಗುತ್ತಿದೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿರುವುದು ತಕ್ಷಣ ನಿಲ್ಲಬೇಕು. ಬಿಜೆಪಿಗರ ಮೇಲಿರುವ ಎಲ್ಲಾ ಪ್ರಕರಣಗಳನ್ನು ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಮತ್ತೆ ತನಿಖೆ ಮಾಡಿ, ನಿಜವಾಗಿಯೂ ತಪ್ಪಿತಸ್ಥರಾಗಿದ್ದರೆ ಶಿಕ್ಷೆಯಾಗಲಿ ಎಂದರು.