ಮಂಗಳೂರು: ಬೇರೆಯವರ ಫ್ಲಾಟ್ ಅನ್ನು ಲೀಸ್ಗೆ ನೀಡಿ ವಂಚಿಸಿದ್ದ ಇಬ್ಬರನ್ನು ಮಂಗಳೂರಿನ ಬಂದರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ಪ್ರದೀಪ್ ಯಾನೆ ದೀಪಕ್ ಅಂದ್ರಾದೆ (31) ಮತ್ತು ಪಳ್ನೀರ್ನ ಇಮ್ತಿಯಾಜ್ (43) ಬಂಧಿತ ಆರೋಪಿಗಳು.
ಬೆಳ್ತಂಗಡಿ ತಾಲೂಕಿನ ಪ್ರಿಯಾ ಕೆ ಆರ್ ಎಂಬವರು ಮಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದು, ಇವರು ಲೀಸ್ಗೆ ಮನೆ ಹುಡುಕುತ್ತಿದ್ದ ಸಂದರ್ಭದಲ್ಲಿ ಆರೋಪಿ ದೀಪಕ್ ನಗರದ ಕೆ ಎಸ್ ರಾವ್ ರೋಡ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಪ್ಲ್ಯಾಟ್ ಖಾಲಿ ಇರುವ ಬಗ್ಗೆ ಹೇಳಿ 2 ವರ್ಷದ ಅವಧಿಗೆ ರೂ. 5 ಲಕ್ಷವನ್ನು ನಿಗದಿಪಡಿಸಿದ್ದನು. 2020 ಜೂನ್ನಲ್ಲಿ ದೀಪಕ್ ಮತ್ತು ಇಮ್ತಿಯಾಝ್ ಎಂಬವರು ಬ್ರಿಜೆಶ್ ಎಂಬಾತನನ್ನು ಮನೆಯ ಮಾಲೀಕ ಮೊಹಮ್ಮದ್ ಅಶ್ರಫ್ ಎಂಬುದಾಗಿ ಕರೆದುಕೊಂಡು ಬಂದು ಅಗ್ರಿಮೆಂಟ್ಗೆ ಸಹಿ ಹಾಕಿಸಿ 5 ಲಕ್ಷ ಹಣ ರೂ. ಪಡೆದುಕೊಂಡಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ
ಪ್ರಿಯಾ ಅವರು ಮನೆಯಲ್ಲಿ ವಾಸವಿರುವ ಸಂದರ್ಭದಲ್ಲಿ 2021ರ ಫೆಬ್ರವರಿಯಲ್ಲಿ ಮನೆಯ ನೈಜ ಮಾಲೀಕರಾದ ಮೊಹಮ್ಮದ್ ಅಲಿ ಎಂಬವರು ಫ್ಲಾಟ್ಗೆ ಬಂದಿದ್ದು ಈ ಸಂದರ್ಭದಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಆರೋಪಿಗಳು ಇದೇ ರೀತಿಯ ಮೂರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದರು. ಇವರು ಬೇರೆ ಬೇರೆ ಕಡೆ ಇದೇ ರೀತಿಯ ವಂಚನೆ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಮುಂದುವರಿಸಿದ್ದಾರೆ.