ಕಲಬುರಗಿ : ಜಿಲ್ಲೆಯ ಚಿತಾಪೂರ ತಾಲೂಕಿನ ಸೂಗುರು (ಎನ್) ಗ್ರಾಮದಲ್ಲಿ ಕಣ್ಮರೆಯಾಗಿದ್ದ ಹಳೇ ಪದ್ಧತಿಯ ರೈತ ಆಚರಣೆಗೆ ಇದೀಗ ಈ ಗ್ರಾಮದ ಭೋಜಲಿಂಗೇಶ್ವರ ಮಠದಿಂದ ಹಂತಿ ರಾಶಿ ಮಾಡುವ ಮೂಲಕ ಮರು ಜೀವ ತುಂಬಿದ್ದಾರೆ.
ಮೊದಲೆಲ್ಲಾ ಸುಗ್ಗಿಕಾಲ ಅಂದ್ರೆ ಸಾಕು ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ವರ್ಷವಿಡೀ ಕಷ್ಟ ಪಟ್ಟು ಬೆಳೆದಂತಹ ಬೆಳೆಯನ್ನು ವಾರಗಳ ಕಾಲ ರಾಶಿ ಮಾಡಿ ಧವಸ, ಧಾನ್ಯಗಳನ್ನು ತಂದು ತಮ್ಮ ಮನೆಯಲ್ಲಿ ಶೇಖರಣೆ ಮಾಡುತ್ತಿದ್ದರು. ಕಾಲ ಕಳೆದಂತೆ ಅದೆಲ್ಲವೂ ಕಡಿಮೆಯಾಗುತ್ತಿದೆ. ಇದೀಗ ರೈತರ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿರುವುದರಿಂದ ರೈತರು ಪರದಾಡುವಂತಾಗಿದೆ. ಆದ್ರೆ, ಈ ಹಳ್ಳಿಯಲ್ಲಿ ಕಣ್ಮರೆಯಾಗಿದ್ದ ಆ ವಿಶೇಷ ಆಚರಣೆಗಳಿಗೆ ಮರು ಚಾಲನೆ ನೀಡಲಾಯಿತು.
ಹಂತಿ ರಾಶಿ ಯುವಕರಿಗೆ ಪರಿಚಯಿಸಲು : ಬನ್ನಿ ಮರದ ಕೆಳಗೆ ಸ್ವಚ್ಛ ಮಾಡಿ ಜೋಳದ ತೆನೆಯ ಮೇಲೆ ಎತ್ತುಗಳನ್ನು ನಡೆಸುವ ಮೂಲಕ ಹಳೆಯ ಹಂತಿ ರಾಶಿಯನ್ನು ಮತ್ತೆ ಯುವ ಪೀಳಿಗೆಗೆ ನೆನಪಿಸುವ ಕೆಲಸವನ್ನು ಸೂಗುರು ಗ್ರಾಮದಲ್ಲಿ ಮಾಡಲಾಯಿತು. ರಾತ್ರಿ ಇಡೀ ಜೋಳದ ರಾಶಿ ಮಾಡಿ ರೈತರು ಸಂಭ್ರಮಿಸಿದ್ದಾರೆ. ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಈರಗಪ್ಪ ತಾತ ಅವರು ಎತ್ತುಗಳಿಗೆ ವಿಶೇಷ ಪೂಜೆ ಮಾಡಿದ ನಂತರ ಹಂತಿ ಕಣದಲ್ಲಿ ರಾಶಿ ಪ್ರಾರಂಭಿಸಲಾಯಿತು.
ಇದೀಗ ಹಂತ ಹಂತವಾಗಿ ಕೃಷಿ ಹಂತಿ ಕಟ್ಟಿ ಮಾಯವಾಗುತ್ತಾ ಸಾಗಿದೆ. ಕಾರಣ ಆಧುನಿಕ ಯಂತ್ರೋಪಕರಣಗಳು ಬಂದಿರುವುದರಿಂದ ರೈತರ ಕೆಲಸಗಳಿಗೆ ಬ್ರೇಕ್ ಬಿದ್ದಂತಾಗಿದೆ. ಹೀಗಾಗಿ, ಭೋಜಲಿಂಗೇಶ್ವರ ಮಠದಿಂದ ಆಯೋಜನೆ ಮಾಡಿರುವ ಹಂತಿಕಟ್ಟೆಯಿಂದ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಶ್ರೀಮಠದಿಂದ ಊಟದ ವ್ಯವಸ್ಥೆ : ಇನ್ನೂ ಸೂಗುರು ಗ್ರಾಮಕ್ಕೆ ಸಾವಿರಾರು ಜನ ರೈತರು ಬಂದು ಈ ಹಂತಿಕಟ್ಟೆ ಜೋಳದ ರಾಶಿ ಮಾಡುತ್ತಿದ್ದಾರೆ. ರಾತ್ರಿ ಇಡೀ ಬರುವ ರೈತರಿಗೆ ಮಠದಿಂದ ಊಟದ ವ್ಯವಸ್ಥೆ ಸಹ ಮಾಡುತ್ತಾರೆ. ಇನ್ನೂ ಹಂತಿ ರಾಶಿ ಮಾಡುವ ಸುತ್ತಲೂ ಬೇರೆ ಊರುಗಳಿಂದ ಬರುವ ಜನರು ಕುತೂಹಲದಿಂದ ನೋಡಿ ಖುಷಿ ಪಡುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಮಠದ ಶ್ರೀಗಳು ಇದನ್ನು ವಿಜೃಂಭಣೆಯಿಂದ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಕಲಬುರಗಿ ಡಿಸಿ: ಇನ್ಮುಂದೆ ನಡೆಯೋಲ್ಲ ಕಾರ್ಖಾನೆಯವರ ಆಟ
ಈಗೀಗ ನವೀನ ಮಾದರಿಯ ಯಂತ್ರೋಪಕರಣಗಳು ಬಂದಿರುವುದರಿಂದ ರೈತರು ರಾಶಿ ಮಾಡುವುದೇ ಕಡಿಮೆಯಾಗಿದೆ. ಹೀಗಾಗಿ, ಇಂತಹ ಹಂತಿ ರಾಶಿಯನ್ನು ಸತತ ಮೂರು ವರ್ಷಗಳ ಕಾಲ ಭೋಜಲಿಂಗೇಶ್ವರ ಮಠದಿಂದ ನಡೆಸಿಕೊಂಡು ಬರಲಾಗುತ್ತಿದ್ದು, ರೈತಾಪಿ ಜನರು ಸಹ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಹಸ್ರಾರು ರೈತರು ಈ ಜೋಳದ ರಾಶಿ ಮಾಡಿ ಖುಷಿ ಪಡುತ್ತಾರೆ ಎಂದು ಭೋಜಲಿಂಗೇಶ್ವರ ಹಿರೇಮಠದ ಪೀಠಾಧಿಪತಿ ಹಿರಗಪ್ಪ ತಾತಾ ಹೇಳಿದರು.