ಹುಬ್ಬಳ್ಳಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಸೂರಜ್ ಅಂಗಡಿ ಗೆಳೆಯರ ಬಳಗದ ವತಿಯಿಂದ ಆಹಾರ ಪದಾರ್ಥಗಳ ಕಿಟ್ ನೀಡಿ ಗೌರವಿಸಲಾಯಿತು.
ಈ ವೇಳೆ ಸೂರಜ್ ಅಂಗಡಿ ಮಾತನಾಡಿ, ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಇಡೀ ಪ್ರಪಂಚವನ್ನೇ ವ್ಯಾಪಿಸಿ ಮಾನವ ಜಗತ್ತನ್ನು ಕೊಲ್ಲುತ್ತಿದೆ. ಈ ವೇಳೆಯಲ್ಲಿ ಜನರಿಗೆ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಯೋ ಅದೇ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಅಂಗಡಿ, ಪ್ರವೀಣ್ಕುಮಾರ್, ಸುನೀಲ್, ದೀಪಕ್ ನಾಯ್ಡು ಹಾಗೂ ಮಂಜುನಾಥ ಹೆಬಸೂರ ಸೇರಿ ಮುಂತಾದವರಿದ್ದರು.