ಹುಬ್ಬಳ್ಳಿ : ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದು ಆಯ್ತು, ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ್ದು ಆಯ್ತು, ಆದರೆ ನಗರದ ಸರ್ಕಾರಿ ಕಚೇರಿಗಳಲ್ಲಿನ ಬ್ಯಾನರ್ಗಳಲ್ಲಿ ಯಡಿಯೂರಪ್ಪ ಅವರೇ ಇನ್ನೂ ಸಿಎಂ ಆಗಿ ಮುಂದುವರೆದಿದ್ದಾರೆ. ಅಲ್ಲದೇ, ಸಚಿವ ಸಂಪುಟ ಸೇರಲ್ಲ ಎಂದು ಹೇಳಿದ್ದ ಜಗದೀಶ್ ಶೆಟ್ಟರ್ ಅವರು ಇನ್ನೂ ಕೂಡ ಮಿನಿಸ್ಟರ್ ಆಗಿಯೇ ಇದ್ದಾರೆ.
ನಗರದ ತಹಶೀಲ್ದಾರ್ ಕಚೇರಿ ಸುತ್ತ ಹಾಕಿರುವ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಬ್ಯಾನರ್ಗಳಲ್ಲಿ ಯಡಿಯೂರಪ್ಪ ಅವರೇ ಸಿಎಂ ಆಗಿ ರಾರಾಜಿಸುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಬಸ್ಗಳಿಗೆ ಅಂಟಿಸಿರೋ ಪ್ಲೇಕ್ಸ್ಗಳಲ್ಲಿ ಕೂಡ ಬಿಎಸ್ವೈ ಅವರೇ ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮಂತ್ರಿ ಮಂಡಲವೂ ವಿಸ್ತರಣೆಯಾಗಿದೆ. ಆದರೂ ಬ್ಯಾನರ್ ಮತ್ತು ಪ್ಲೆಕ್ಸ್ಗಳಲ್ಲಿ ರಾಜ್ಯದ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರೆದಿದ್ದಾರೆ.
ಅಲ್ಲದೇ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸೇರುವುದಿಲ್ಲ ಎಂದು ಹೇಳಿಕೆ ನೀಡಿದ್ದ ಜಗದೀಶ್ ಶೆಟ್ಟರ್ ಅವರು ಮನೆಯಲ್ಲಿ ಮಾತ್ರ ಇನ್ನೂ ಕೈಗಾರಿಕಾ ಸಚಿವರಾಗಿಯೇ ಉಳಿದಿದ್ದಾರೆ.