ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಂತೆ ಧಾರವಾಡ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಫೈಟ್ ಜೋರಾಗಿದೆ.
ಶಾಸಕ ಶಂಕರ್ ಪಾಟೀಲ ಮುನೇನಕೊಪ್ಪ ಅವರಿಗೆ ಮಂತ್ರಿಗಿರಿಗೆ ಫಿಕ್ಸ್ ಎನ್ನಲಾಗುತ್ತಿದ್ದು, ಸಿಎಂ ಆಗಲು ಹೊರಟಿದ್ದ ಅರವಿಂದ ಬೆಲ್ಲದಗೆ ತೀವ್ರ ಹಿನ್ನೆಡೆಯಾಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.
ಶಂಕರ ಪಾಟೀಲ ಮುನೇನಕೊಪ್ಪ ಪಕ್ಷ ನಿಷ್ಠೆ, ಮುಖಂಡರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೂಡಿ ಹೋರಾಟ ನಡೆಸಿದ್ದರು. ಅದಲ್ಲದೇ ರೈತ ಬಂಡಾಯದ ನೆಲದಿಂದ ಬಂದಿದ್ದಾರೆ. ಬಿಜೆಪಿ ಆಡಳಿತದಲ್ಲಿ ಧಾರವಾಡ ಗ್ರಾಮೀಣ ಭಾಗದ ಶಾಸಕರಿಗೆ ಎಂದೂ ಮಂತ್ರಿಗಿರಿ ಸಿಕ್ಕಿಲ್ಲ. ಈ ಎಲ್ಲವನ್ನೂ ನೋಡಿದಾಗ ಶಂಕರ ಪಾಟೀಲ ಮುನೇನಕೊಪ್ಪ ಮಂತ್ರಿಯಾಗುವುದು ಖಚಿತ ಎನ್ನಲಾಗ್ತಿದೆ.
ಜಗದೀಶ್ ಶೆಟ್ಟರ್ ಅವರನ್ನ ಜಿಲ್ಲೆಯಿಂದ ಯಾರು ಮಂತ್ರಿಯಾಗಬೇಕು ಎಂದು ಪಕ್ಷದ ವರಿಷ್ಠರು ಸಲಹೆ ಕೇಳಿದ್ರೆ, ಮುನೇನಕೊಪ್ಪ ಹೆಸರು ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ. ಸಚಿವ ಸ್ಥಾನಕ್ಕಾಗಿ ಹೋರಾಡಿ ಕೈ ಸುಟ್ಟುಕೊಂಡಿರುವ ಬೆಲ್ಲದ್ ಸದ್ಯ ಯಾವ ಗಾಳ ಉರುಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.