ಹುಬ್ಬಳ್ಳಿ: ಶಿರಡಿಯ ಸಾಯಿಬಾಬ ದೇವರ ದರ್ಶನ ಹಾಗೂ ಸೇವೆಗಳಿಗೆ ಸಾರ್ವಜನಿಕರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಶಿರಡಿಗೆ ಬಸ್ ಸಂಚಾರವನ್ನು ಪುನಾರಂಭಿಸಲಾಗಿದೆ. ಅಲ್ಲದೇ ದಸರಾ ಹಬ್ಬಕ್ಕೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 125 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾ.ಕ.ರಾ.ಸಾ ಸಂಸ್ಥೆ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಶಿರಡಿಯ ಸಾಯಿಬಾಬ ದೇವಸ್ಥಾನ ಸೇರಿದಂತೆ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ನಗರದಿಂದ ಅಲ್ಲಿಗೆ ಸಂಚರಿಸುತ್ತಿದ್ದ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವ ಹಿನ್ನೆಲೆ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.
ಅ.7ರಿಂದ ಸಾಯಿಬಾಬ ದೇವರ ದರ್ಶನ ಮತ್ತು ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಎಸಿ ಸ್ಲೀಪರ್ ಮತ್ತು ಮಲ್ಟಿ ಆ್ಯಕ್ಸಲ್ ವೋಲ್ವೋ ಬಸ್ಗಳ ಸಂಚಾರವನ್ನು ಪುನಾರಂಭಿಸಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹೀಗಿದೆ ಪ್ರಯಾಣ ದರ:
ಸ್ಲೀಪರ್ ಬಸ್ ಸಂಜೆ 7ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ7-30ಕ್ಕೆ ಶಿರಡಿ ತಲುಪುತ್ತದೆ. ಶಿರಡಿಯಿಂದ ಸಂಜೆ 7ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 7-30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ರೂ. 1,110 ರೂ.
ವೋಲ್ವೋ ಬಸ್ ರಾತ್ರಿ 8ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 7ಕ್ಕೆ ಶಿರಡಿ ತಲುಪುತ್ತದೆ. ಶಿರಡಿಯಿಂದ ರಾತ್ರಿ 8ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 7ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ರೂ.1,070 ರೂ.
ಹಬ್ಬಕ್ಕೆ 125 ಹೆಚ್ಚುವರಿ ಬಸ್:
ದಸರಾ ಹಬ್ಬ ಹಾಗೂ ಸಾಲು ಸಾಲು ರಜೆಗಳಿರುವುದರಿಂದ ಮುಂಬೈ, ಪುಣೆ, ಗೋವಾ, ಬೆಂಗಳೂರು, ಮಂಗಳೂರು ಮತ್ತಿತರ ದೂರದ ಊರುಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಹೆಚ್ಚಿನ ಜನರ ಸಂಚಾರ ನಿರೀಕ್ಷಿಸಲಾಗಿದೆ.
ಅವರ ಅನುಕೂಲಕ್ಕಾಗಿ ಅ.12 ಮತ್ತು13ರಂದು ಈ ಸ್ಥಳಗಳಿಂದ ಹುಬ್ಬಳ್ಳಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಹಾಗೆಯೇ ಹಬ್ಬ ಮುಗಿಸಿ ಹಿಂದಿರುಗುವವರ ಅನುಕೂಲಕ್ಕಾಗಿ ಅ.20 ಬುಧವಾರ ಹಾಗು 24 ರಂದು ರವಿವಾರ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತಿತರ ಸ್ಥಳಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ವೋಲ್ವೋ, ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ನಿತ್ಯದ ಬಸ್ಗಳ ಜತೆಗೆ 125ಕ್ಕೂ ಹೆಚ್ಚು ಬಸ್ಗಳನ್ನು ಹೆಚ್ಚುವರಿಯಾಗಿ ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಮುಂಗಡ ಬುಕ್ಕಿಂಗ್, ರಿಯಾಯಿತಿ:
ದೂರ ಮಾರ್ಗದ ಸಾರಿಗೆಗಳಿಗೆ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. KSRTC ಮೊಬೈಲ್ ಆ್ಯಪ್, www.ksrtc.in ವೆಬ್ ಸೈಟ್ನಲ್ಲಿ ಆನ್ ಲೈನ್ ಮೂಲಕ, ಬಸ್ ನಿಲ್ದಾಣಗಳಲ್ಲಿ ಮತ್ತು ಫ್ರ್ಯಾಂಚೈಸ್ ಕೌಂಟರ್ಗಳಲ್ಲಿ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸಬಹುದು.
ನಾಲ್ಕು ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್ನಲ್ಲಿ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು. ಹೋಗುವಾಗ ಮತ್ತು ಬರುವಾಗಿನ ಪ್ರಯಾಣಕ್ಕೆ ಒಮ್ಮೆಗೆ ಟಿಕೆಟ್ ಮಾಡಿಸಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಕೊನೆ ಕ್ಷಣದ ನೂಕು ನುಗ್ಗಲು ತಪ್ಪಿಸುವ ದೃಷ್ಟಿಯಿಂದ ವಿಶೇಷ ರಿಯಾಯಿತಿಯೊಂದಿಗೆ ಮುಂಗಡ ಆಸನ ಕಾಯ್ದಿರಿಸಿಕೊಳ್ಳುವುದು ಸೂಕ್ತ ಎಂದು ರಾಮನಗೌಡರ ತಿಳಿಸಿದ್ದಾರೆ.