ಹುಬ್ಬಳ್ಳಿ : ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ವಿವಿಧ ವಾರ್ಡ್ಗಳಿಂದ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಅಭ್ಯರ್ಥಿಗಳು ಸೇರಿದಂತೆ ಅವರಿಗೆ ಬೆಂಬಲ ನೀಡಿದ ಬಿಜೆಪಿ ಘಟಕಗಳ 16 ಜನರನ್ನು ಪಕ್ಷದಿಂದ ಉಚ್ಛಾಟಿಸಿ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಅರವಿಂದ ಬೆಲ್ಲದ್ ಆದೇಶ ಹೊರಡಿಸಿದ್ದಾರೆ.
![hubli BJP expelled 16 people from the party](https://etvbharatimages.akamaized.net/etvbharat/prod-images/kn-hbl-04-bjp-suspend-av-7208089_30082021172043_3008f_1630324243_697.jpg)
ಮಾಜಿ ಮೇಯರ್ ಮಂಜುಳಾ ಅಕ್ಕೂರ, ಮಾಜಿ ಉಪಮೇಯರ್ ಲಕ್ಷ್ಮೀ ಉಪ್ಪಾರ, ಅವರ ಪತಿ ಮಾಜಿ ಪಾಲಿಕೆ ಸದಸ್ಯ ಲಕ್ಷ್ಮಣ ಉಪ್ಪಾರ ಅವರ ಪುತ್ರ ಬಿಜೆಪಿ ಯುವ ಘಟಕದ ಅಧ್ಯಕ್ಷ ಕಿರಣ ಉಪ್ಪಾರ ಸೇರಿದಂತೆ 16 ಜನರನ್ನು ಉಚ್ಚಾಟನೆ ಮಾಡಲಾಗಿದೆ.
![hubli BJP expelled 16 people from the party](https://etvbharatimages.akamaized.net/etvbharat/prod-images/kn-hbl-04-bjp-suspend-av-7208089_30082021172043_3008f_1630324243_598.jpg)
ಉಚ್ಛಾಟಿತರು ಮುಂದಿನ 6 ವರ್ಷದವರೆಗೆ ಪಕ್ಷದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಬಿಜೆಪಿ ಬ್ಯಾನರ್ನಡಿ ಯಾವುದೇ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಬಂಡಾಯವೆದಿದ್ದ ಅಭ್ಯರ್ಥಿಗಳನ್ನು ಮನವೊಲಿಸಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಸಲು ಬಿಜೆಪಿ ಪಕ್ಷದ ನಾಯಕರು ಸಾಕಷ್ಟು ಪ್ರಯತ್ನಿಸಿದರೂ, ಬಂಡಾಯ ಅಭ್ಯರ್ಥಿಗಳು ಜಪ್ಪಯ್ಯ ಎನ್ನದಿರುವ ಹಿನ್ನೆಲೆಯಲ್ಲಿ ಬಿಜೆಪಿ ಉಚ್ಛಾಟನೆ ಅಸ್ತ್ರ ಪ್ರಯೋಗಿಸಿದೆ.