ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಹುಬ್ಬಳ್ಳಿಯ ಜನತೆಗೆ ಜನಪದ ಸೊಗಡು ಸವಿಯಲು ಒಂದು ಸುವರ್ಣ ಅವಕಾಶ ಕಲ್ಪಿಸಿದ್ದು, ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ 30 ಕಲಾ ತಂಡಗಳು ತಮ್ಮ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ, ಸಿಳ್ಳೆಗಳನ್ನು ಗಿಟ್ಟಿಸಿಕೊಂಡವು.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗ ಭಾರತದ ವೈವಿಧ್ಯತೆಯಲ್ಲಿ ಬೆರತು ಹೋದ ಆಫ್ರಿಕನ್ ಮೂಲದವರು. ತಮ್ಮ ಮೂಲ ಖಂಡದ ಸಂಸ್ಕೃತಿ ಬೇರು ಅವರಲ್ಲಿ ಉಳಿದು ಬಂದಿದೆ. ಇದರ ಕುರುಹು ಎಂಬಂತೆ ಡಮಾಮಿ ಹಾಗೂ ಪುಗಡಿ ನೃತ್ಯಗಳನ್ನು ಕಾರವಾರದಿಂದ ಆಗಮಿಸಿದ ಸುಮಿತ್ರ ಎಸ್.ಸಿ. ಹಾಗೂ ಜಾನಕಿ ತಂಡಗಳು ವಿಶಿಷ್ಟ ಹಾಡಿನೊಂದಿಗೆ ಪ್ರದರ್ಶಿಸಿದರು.
ಮಂಡ್ಯ ಪೂಜಾ ಕುಣಿತ, ರಾಮನಗರದ ಪಟ ಕುಣಿತ, ಕೋಲಾರದ ಹುಲಿವೇಶ, ಬಳ್ಳಾರಿಯ ಹಗಲುವೇಷ ಪ್ರಕ್ಷೇಕರನ್ನು ರಂಜಿಸಿದವು. ಚಾಮರಾಜನರದ ನೀಲಗಾರ ಪದ, ವಿಜಯಪುರದ ಗೀಗಿ ಪದ, ಬೆಳಗಾವಿಯ ಭಜನೆ ಪದ, ಬಾಗಕೋಟೆಯ ಚೌಡಕಿ ಪದ ಸೇರಿದಂತೆ ಧಾರವಾಡ ಕಲಾವಿದರು ತತ್ವಪದ, ಸೋಬಾನೆ ಪದಗಳನ್ನು ಹಾಡಿದರು. ಧಾರವಾಡ ಭಾಗ್ಯಶ್ರೀ, ಅಭಿವ್ಯಕ್ತಿ, ಹುಬ್ಬಳ್ಳಿ ಸದಾನಂದ ಹಾಗೂ ರಾಧ ಕೃಷ್ಣ ತಂಡಗಳು ಹಲವು ಜನಪದ ಗೀತಗಳ ರೂಪಕವನ್ನು ಪ್ರಸ್ತತಪಡಿಸಿದವು. ಇದರೊಂದಿಗೆ ಚಿತ್ರದುರ್ಗದ ಕಹಳೆ, ಮೈಸೂರಿನ ಕಂಸಾಳೆ ಹಾಗೂ ನಾಗರಿ, ಮಂಡ್ಯದ ತಮಟೆ, ಉಡುಪಿಯ ಚಂಡೆ ವಾದನ, ಧಾರವಾಡದ ಕರಡಿ ಮಜಲು ಹಾಗೂ ಜಗ್ಗಲಿಗೆಗಳ ಧ್ವನಿ ಜಾನಪದ ಜಾತ್ರೆಯಲ್ಲಿ ಮಾರ್ದನಿಸಿತು.