ಧಾರವಾಡ: ಜಾನುವಾರುಗಳಲ್ಲಿ ಬಾಧಿಸುತ್ತಿರುವ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಕೂಡಾ ಕಂಡುಬರುತ್ತಿದೆ. ಇದುವರೆಗೂ ಸಾವು ಕಂಡು ಬಂದಿಲ್ಲವಾದರೂ ನಿಧಾನವಾಗಿ ರೋಗ ಹರಡುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 43 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಸರ್ಕಾರ ಕೂಡಾ ಈ ಕುರಿತು ಸಾಕಷ್ಟು ಗಮನ ವಹಿಸುತ್ತಿದೆ. ಈ ರೋಗ ಧಾರವಾಡ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ವ್ಯಾಪಿಸಿದೆ.

ಆಫ್ರಿಕಾ ದೇಶದಿಂದ ಪ್ರಾರಂಭವಾದ ಈ ರೋಗ ನಿಧಾನವಾಗಿ ಎಲ್ಲಾ ದೇಶಗಳಲ್ಲೂ ಹರಡುತ್ತಿದೆ. ಈ ಕಾಯಿಲೆ ಕಂಡುಬಂದ ಜಾನುವಾರುಗಳು ಜ್ವರ, ನೋವು, ಮೇವು ತಿನ್ನಲಾರದೇ ನರಳಾಡುತ್ತವೆ. ಆದರೆ ಸಾಮಾನ್ಯ ಚಿಕಿತ್ಸೆಗೆ ಅವು ಸ್ಪಂದಿಸುತ್ತವೆ. ಈ ರೋಗವನ್ನು ಸೂಕ್ತವಾದ ಲಸಿಕೆ ಮತ್ತು ಚಿಕಿತ್ಸೆ ನೀಡುವ ಮೂಲಕ ತಡೆಗಟ್ಟಬಹುದಾಗಿದೆ ಎಂದು ಪಶು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಗೆ ಪ್ರಾಯೋಗಿಕ ಲಸಿಕೆ ವಿತರಣೆ ಮಾಡಲಾಗಿದೆ. ಹುಬ್ಬಳ್ಳಿ ತಾಲೂಕಿಗೆ 4,300 ಡೋಸ್ ಲಸಿಕೆ, ಕುಂದಗೋಳ ತಾಲೂಕಿಗೆ 1,000 ಡೋಸ್ ಲಸಿಕೆ, ಧಾರವಾಡ ತಾಲೂಕಿಗೆ 4,700 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 10 ಸಾವಿರ ಡೋಸ್ ಲಸಿಕೆ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ನೀಡಲಾದ ಲಸಿಕೆ ಪ್ರಾಯೋಗಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಲಸಿಕೆ ಸಿಗುತ್ತದೆ. ರೈತರು ಸಹ ಜಾಗೃತಿ ವಹಿಸಿ ರೋಗ ನಿಯಂತ್ರಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಕಂಡುಬಂದ ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಈ ರೋಗ ಹೊರತುಪಡಿಸಿ ಬೇರೆ ಬೇರೆ ರೋಗಗಳು ಸಹ ಜಾನುವಾರುಗಳಿಗೆ ಬರುವ ಲಕ್ಷಣಗಳಿವೆ. ಆದ್ರೆ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದರು ಇಲಾಖೆಯ ಉಪ ನಿರ್ದೇಶಕ ಪರಮೇಶ್ವರ್ ನಾಯಕ್ ಮಾಹಿತಿ ನೀಡಿದ್ದಾರೆ.