ಧಾರವಾಡ: ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸುಳಿವನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಟ್ಟುಕೊಟ್ಟಿದ್ದಾರೆ. ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ. ದೇವೇಗೌಡರು ಕೂಡ ಅದನ್ನೇ ಹೇಳಿದ್ದಾರೆ ಎಂದು ಬೆಂಬಲ ನೀಡುವ ಸುಳಿವು ನೀಡಿದ್ದಾರೆ.
ಧಾರವಾಡದಲ್ಲಿ ಉಪ ಚುನಾವಣಾ ಸಮೀಕ್ಷೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈವರೆಗೆ ನಡೆಸಿದ ಸಮೀಕ್ಷೆಗಳು ಯಾವುದೂ ಸರಿಯಾಗಿಲ್ಲ. ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ. ಎಲ್ಲರದೂ ಒಂದೇ ರೀತಿಯಾಗಿ ಬಂದಿಲ್ಲ ಎಂದರು. ಜನರ ಭಾವನೆಗಳು ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬುವುದಿಲ್ಲ, ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.
7 ಸೀಟ್ ಬಂದರೆ ಮಾತ್ರ ರಾಜ್ಯ ಬಿಜೆಪಿ ಸರ್ಕಾರ ಉಳಿಯುತ್ತೆ. ಇಲ್ಲವಾದ್ರೆ ಬೇರೆ ಡೆವೆಲಪ್ಮೆಂಟ್ ನಡೆಯತ್ತೆ. ಜನರಿಗೆ ಸರ್ಕಾರ ಬೀಳಬಾರದು ಎಂಬ ಆಸೆ ಇದೆ. ಆ ಹಿನ್ನೆಲೆ ಏನಾದ್ರೂ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೀಳಬಾರದು ಎನ್ನುವ ಮಾತನ್ನೂ ಕೂಡ ದೇವೇಗೌಡರು ನಿನ್ನೆ ಹೇಳಿದ್ದಾರೆ. ಸಿದ್ದರಾಮಯ್ಯನವರ ಜೊತೆ ಸೇರಿ ಕಾಂಗ್ರೆಸ್ಗೆ ಕೈ ಜೋಡಿಸುವ ಮನಸ್ಸು ದೇವೇಗೌಡರಿಗೆ ಇಲ್ಲ. ಫಲಿತಾಂಶ ಬಂದ ನಂತರ ಎಲ್ಲಾ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಎನ್ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ. ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನ ಇಟ್ಟುಕೊಳ್ಳಬಾರದು. ಎನ್ಕೌಂಟರ್ ಮಾಡಿದ್ದು ಸರಿಯಾದ ಕ್ರಮ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.