ಹುಬ್ಬಳ್ಳಿ: ಲಾಕ್ ಡೌನ್ನಿಂದ ಥಿಯೇಟರ್, ಮಾಲ್, ಹೋಟೆಲ್, ಮದ್ಯದ ಅಂಗಡಿ ಎಲ್ಲಾ ಬಂದ್ ಆಗಿದೆ. ರಾಜ್ಯದ ಗಡಿಗಳೂ ಬಂದ್ ಆಗಿದ್ದು ಜನರು ಕಂಗಾಲಾಗಿದ್ದಾರೆ. ಇನ್ನು ಎಷ್ಟೋ ಮಂದಿ ಮದ್ಯಪ್ರಿಯರು ಮದ್ಯ ಸಿಗದೆ ಮಾನಸಿಕ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯ ಮನೋವೈದರೊಬ್ಬರು ಕೂಡಾ ಇತ್ತೀಚೆಗೆ ಮದ್ಯಪ್ರಿಯರ ಪರವಾಗಿ ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿ ದಂಡ ಕಟ್ಟಿ ಬಂದಿದ್ದರು. ಇನ್ನು ಮದ್ಯಪ್ರಿಯರಿಗೆ ಏನೋ ಕಳೆದುಕೊಂಡಂತೆ ಆಗಿದ್ದು ಆನ್ಲೈನ್ನಲ್ಲಾದರೂ ಮದ್ಯ ಮಾರಾಟ ಮಾಡುವಂತೆ ಪ್ರತಿನಿತ್ಯ ಬೇಡಿಕೆ ಇಡುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ಗೋಕುಲ್ ರಸ್ತೆಯ ತೇಜ್ ಲಿಕ್ಕರ್ ಶಾಪ್ ಹೆಸರು ಬಳಸಿಕೊಂಡು ನಕಲಿ ಫೇಸ್ಬುಕ್ ಸೃಷ್ಟಿಸಿ ಮದ್ಯವನ್ನು ಆನ್ಲೈನ್ ಡೆಲಿವರಿ ನೀಡಲಾಗುವುದು ಎಂದು ಜಾಹೀರಾತು ಹರಿಯಬಿಟ್ಟಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕ ಅಕ್ಷಯ್ ಪವಾರ್ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.