ದಾವಣಗೆರೆ: ಜಿಲ್ಲೆಯ ಮಲೆಬೆನ್ನೂರು ಪಟ್ಟಣದ ಜುಮಾ ಮಸೀದಿ ಸಮೀಪ ನಿನ್ನೆ ರಾತ್ರಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ: ಮಲೆಬೆನ್ನೂರಿನ ಶಾದಿ ಮಹಲ್, ಜುಮಾ ಮಸೀದಿ ಹಾಗೂ ಜಾಮೀಯಾ ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ವಕ್ಫ್ ಮಂಡಳಿಗೆ ಒಂದು ಗುಂಪು ದೂರು ನೀಡಿತ್ತು. ವಿಚಾರಣೆ ನಡೆಸಿದ ವಕ್ಫ್ ಮಂಡಳಿಯು ಮಸೀದಿ, ವಿದ್ಯಾ ಸಂಸ್ಥೆ, ಶಾದಿಮಹಲ್ ಕಾರ್ಯಕಾರಿ ಸಮಿತಿಯನ್ನು ಅಮಾನತ್ತಿನಲ್ಲಿಟ್ಟಿತ್ತು. ಹಾಗೆಯೇ ಹಿಂದಿನ ಐದು ವರ್ಷಗಳ ಲೆಕ್ಕ ಪರಿಶೋಧನೆ ಮಾಡುವಂತೆ ಮತ್ತು ಆಡಳಿತಾಧಿಕಾರಿ ನೇಮಕ ಮಾಡುವಂತೆ ಶಿಫಾರಸು ಮಾಡಿತ್ತು. ದೂರು ನೀಡಿದ್ದ ಗುಂಪು, ಸುದ್ದಿಗೋಷ್ಠಿ ನಡೆಸಿ ಈ ಎಲ್ಲಾ ವಿಚಾರ ಬಹಿರಂಗಪಡಿಸಿತ್ತು.
ಈ ಹಿನ್ನೆಲೆ ದೂರು ನೀಡಿದ್ದ ಗುಂಪಿನ ಶೌಕತ್ ಅಲಿ ಹಾಗೂ ಅವರ ಮಗ ಶಹಬಾಜ್ ಹಾಗೂ ಸೈಯದ್ ಖಾಲಿದ್ ಎಂಬುವವರ ಮೇಲೆ ಇನ್ನೊಂದು ಗುಂಪು ಮಾತಿನ ಚಕಮಕಿ ನಡೆಸಿ, ಕೊನೆಯಲ್ಲಿ ಹಲ್ಲೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದು, ಮುಂಜಾಗೃತ ಕ್ರಮವಾಗಿ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.