ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಅದೆಷ್ಟು ವೇಗವಾಗಿ ಹರುಡತ್ತಿದ್ಯೋ ಅಷ್ಟೇ ವೇಗವಾಗಿ ಜನರನ್ನ ಬಲಿಯೂ ಪಡೆಯುತ್ತಿದೆ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಕೊರೊನಾ ವಾರಿಯರ್ಸ್ ಪಾಡು ಹೇಳತೀರದು.
ಕೊರೊನಾ ಸೋಂಕು ಲೆಕ್ಕಿಸದೆ ಕರ್ತವ್ಯಕ್ಕೆ ಹಾಜರಾಗಿ ತುರ್ತು ಸೇವೆಯಲ್ಲಿ ಪಾಲ್ಗೊಂಡಿದ್ದ ಹಲವು ಮಂದಿ ಸಾರಿಗೆ ನೌಕರರು ಸೋಂಕು ತಗುಲಿ ಗುಣಮುಖರಾಗಿದ್ದರೆ, ಇನ್ನೊಂದಿಷ್ಟು ಮಂದಿ ಸೋಂಕಿಗೆ ಬಲಿಯಾದರು. ಕೊರೊನಾ ಮೊದಲ ಅಲೆಯಲ್ಲಿ 110 ನೌಕರರು ಹಾಗೂ ಎರಡನೇ ಅಲೆಯಲ್ಲಿ 120 ಸಾರಿಗೆ ನೌಕರರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಆದರೆ ಮೃತಪಟ್ಟ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ನೌಕರರ ಕುಟುಂಬಗಳಿಗೆ 30 ಲಕ್ಷ ಪರಿಹಾರ ಹಣ ನೀಡುವಂತೆ ಸಾರಿಗೆ ನೌಕರರ ಒಕ್ಕೂಟ ಆಗ್ರಹಿಸಿದೆ. ಸರ್ಕಾರವೂ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಇಲ್ಲಿಯತನಕ ಕೊರೊನಾ ಸೋಂಕಿನಿಂದ 230 ಮಂದಿ ಮೃತರಾಗಿದ್ದಾರೆ. ಇದರಲ್ಲಿ ಕೇವಲ 7 ಕುಟುಂಬಗಳಿಗೆ ಮಾತ್ರ ಪರಿಹಾರ ಹಣ ನೀಡಲಾಗಿದೆ. ಹೀಗಾಗಿ ಎಲ್ಲಾ ಕುಟುಂಬಗಳಿಗೂ ಪರಿಹಾರ ನೀಡುವಂತೆ ಸಾರಿಗೆ ನೌಕರರ ಒಕ್ಕೂಟದ ಸದಸ್ಯ ಆನಂದ್ ಒತ್ತಾಯ ಮಾಡಿದ್ದಾರೆ.