ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಕೆಲಕಡೆಗಳಲ್ಲಿ ಇಂದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಎಚ್ಎಎಲ್ ವಿಮಾನ ನಿಲ್ದಾಣದಿಂದ ಅಮಿತ್ ಶಾ ಸಂಚರಿಸುವ ಮಾರ್ಗಗಳಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ವಾಹನ ಸವಾರರು ರಸ್ತೆಯಲ್ಲೇ ಕೆಲಕಾಲ ಬಸವಳಿದರು. ಶಾ ಆಗಮಿಸುವ ಅರ್ಧಗಂಟೆ ಮುನ್ನವೇ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಿಲೋ ಮೀಟರ್ಗಟ್ಟಲೆ ರಸ್ತೆಯಲ್ಲಿ ಸವಾರರು ಪರದಾಡುವಂತಾಯಿತು.
ಮಧ್ಯಾಹ್ನ ಅರಮನೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಹೆಬ್ಬಾಳದ ಎಸ್ಟಿಎಂ ಮಾಲ್ನಿಂದ ಕುಮಾರಕೃಪ ರಸ್ತೆಯವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ಸಂಸದ ತೇಜಸ್ವಿ ಅವರ ಕಚೇರಿ ಉದ್ಘಾಟನೆಗಾಗಿ ಜಯನಗರಕ್ಕೆ ಆಗಮಿಸಿದ್ದರಿಂದ ಈ ಭಾಗದಲ್ಲಿಯೂ ಕೆಲಗಂಟೆಗಳ ಕಾಲ ವಾಹನ ದಟ್ಟನೆ ಉಂಟಾಯಿತು.
ಇನ್ನು ವಾಹನ ಸವಾರರಿಗೆ ಅಡಚಣೆ ಉಂಟಾದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರಿಗೆ ಸಹಕರಿಸಿದ ನಗರದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
