ಬೆಂಗಳೂರು: ಬಿಜೆಪಿಗೆ ಸೇರ್ಪಡೆಯಾಗಿ ಶಿವಾಜಿನಗರದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ರೋಷನ್ ಬೇಗ್ಗೆ ನಿರಾಸೆಯಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಅನ್ನು ಮಾಜಿ ಕಾರ್ಪೊರೇಟರ್ ಶರವಣ ಅವರಿಗೆ ನೀಡಲಾಗಿದೆ.

13 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಕೆಲವೇ ಗಂಟೆಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿ, ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಯನ್ನ ಅಂತಿಮಗೊಳಿಸಿದ ಹೆಸರು ಪ್ರಕಟಿಸಿದೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಅನರ್ಹ ಶಾಸಕ ರೋಷನ್ ಬೇಗ್, ತಮಗೆ ಇಲ್ಲವೇ ತಮ್ಮ ಪುತ್ರ ರುಮಾನ್ ಬೇಗ್ಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು. ಅಳೆದು ತೂಗಿದ ಬಿಜೆಪಿ ನಾಯಕರು ರೋಷನ್ ಬೇಗ್, ರುಮಾನ್ ಬೇಗ್ ಇಬ್ಬರನ್ನು ಬಿಟ್ಟು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರನ್ನು ಕಡೆಗಣಿಸಿ, ಸ್ಥಳೀಯ ನಾಯಕ ಮಾಜಿ ಕಾರ್ಪೊರೇಟರ್ ಶರವಣ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ.