ಬೆಂಗಳೂರು: ಚುನಾವಣಾ ವ್ಯವಸ್ಥೆಯನ್ನು ಟಿ.ಎನ್. ಶೇಷನ್ ರೀತಿ ಪರಿಣಾಮಕಾರಿಯಾಗಿ ಬದಲಾವಣೆ ಮಾಡುವ ಅಧಿಕಾರಿಗಳು ಬೇಕಿದೆ, ಕಾನೂನು ರೀತಿಯಲ್ಲಿಯೇ ಚುನಾವಣಾ ವ್ಯವಸ್ಥೆ ಸುಧಾರಣೆ ಮಾಡಬೇಕಿದೆ ಎಂದು ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಭಾರತ ಸಂವಿಧಾನ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ವ್ಯವಸ್ಥೆ ಬಹಳ ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಮಧ್ಯಮ, ಬಡ ವರ್ಗದ ಜನರು ಚುನಾವಣೆಗೆ ನಿಲ್ಲುವುದು ಇರಲಿ, ಚುನಾವಣಾ ವ್ಯವಸ್ಥೆ ಬಗ್ಗೆ ಗಮನವನ್ನೇ ಹರಿಸದ ಸ್ಥಿತಿ ನಿರ್ಮಾಣವಾಗಿದೆ. ಟಿ.ಎನ್. ಶೇಷನ್ ರೀತಿ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಯೋಚಿಸ ಬೇಕಿದೆ. ಕಾನೂನು ರೀತಿಯಲ್ಲಿಯೇ ವ್ಯವಸ್ಥೆಯನ್ನು ಸುಧಾರಿಸಬೇಕಿದೆ ಎಂದರು.
ಬಂಟಿಂಗ್ಸ್, ಬ್ಯಾನರ್, ಪೋಸ್ಟರ್ಗಳೇ ಎಲ್ಲಾ ಕಡೆ ತುಂಬಿ ಹೋಗಿರುತ್ತಿತ್ತು, ಆದರೆ ಈಗ ಬ್ಯಾನರ್ಗಳ ಕಾಟ ತಪ್ಪಿದೆ. ಇದಕ್ಕೆ ಇತ್ತೀಚೆಗೆ ನಡೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಿದರ್ಶನ. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 1, ಪಕ್ಷೇತರ ಹಾಗು 2 ಎಂಎಲ್ಸಿ ಬಲ ಪಡೆದರೆ, ಬಿಜೆಪಿ 14, ಪಕ್ಷೇತರ 4, ಸಂಸದ 1, ಎಂಎಲ್ಸಿ 1 ಸ್ಥಾನದ ಬಲ ಹೊಂದಿತ್ತು. ಬೆಂಗಳೂರಿನಿಂದ 8 ಎಂಎಲ್ಸಿಗಳು ಮತ ಹಾಕಲು ಅಲ್ಲಿಗೆ ಬಂದರು. ಹಾಗಾಗಿ ನಾವು ಜಾಸ್ತಿ ಸಂಖ್ಯೆ ಹೊಂದಿದ್ದರೂ ಅಧಿಕಾರದಿಂದ ಹೊರಗೆ ಇರಬೇಕಾಯಿತು. ಅಂಬೇಡ್ಕರ್ ಈ ರೀತಿಯ ಕನಸು ಕಂಡಿರಲಿಲ್ಲ ಎಂದರು.
ಮತದಾರರು ಇಂದು ಅವರು ಅಷ್ಟು ಕೊಟ್ಟಿದ್ದಾರೆ, ನೀವು ಎಷ್ಟು ಕೊಡುತ್ತೀರಿ ಎಂದು ಕೇಳುತ್ತಾರೆ. ಶಿಕ್ಷಕರ ಕ್ಷೇತ್ರದಿಂದ ಹಿಡಿದು ಎಲ್ಲಾ ಕಡೆ ಪರಿಸ್ಥಿತಿ ಹೀಗೆಯೇ ಇದ್ದು, ಈ ವ್ಯವಸ್ಥೆ ಬದಲಾಗಬೇಕು ಎಂದರು. ಸಿಎಎ, ಎನ್ಆರ್ಸಿ ಜಾರಿಗೆ ತರಲಾಗುತ್ತಿದೆ ಆದರೆ ಜನನ, ಮರಣ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೆ ಬಂದಿದ್ದೇ 1970 ರಲ್ಲಿ. ಹಾಗೇ ನೋಡಿದರೆ ನಮ್ಮ ಜನನ ಪ್ರಮಾಣ ಪತ್ರವೇ ಸಿಕ್ಕಲ್ಲ, ಇನ್ನು ನಮ್ಮ ತಂದೆ-ತಾಯಿ ಜನನ ಪ್ರಮಾಣ ಪತ್ರ ಎಲ್ಲಿಂದ ತರಲಿ, ಈ ರೀತಿಯ ಕಾನೂನುಗಳು ಜನರಿಗೆ ತೊಂದರೆಯಾಗಬಾರದು ಎಂದರು.
ಜನ ಗಣತಿ ಏಪ್ರಿಲ್15 ರಂದು ಆರಂಭಗೊಳ್ಳಲಿದ್ದು, ಆದರೆ ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಹಾಗಾಗಿ ಕೊರೊನಾ ಹೋಗುವವರೆಗೂ ಜನಗಣತಿ ಮುಂದೂಡುವಂತೆ ಮನವಿ ಮಾಡಿದರು.