ಬೆಂಗಳೂರು: ಡಿ.ಜೆ.ಹಳ್ಳಿಯ ಪೊಲೀಸ್ ಸ್ಟೇಷನ್ ಬಳಿ ಹೆಚ್ಚಿನ ಜನ ಸೇರಿದಾಗ ಎಸ್ಡಿಪಿಐ ಪಕ್ಷದ ಮುಖಂಡ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಆ ವಿಡಿಯೋ ಕೂಡಾ ಇದೆ. ಆದರೂ ಅವರನ್ನು ಬಂಧಿಸಿದ್ದಾರೆ. ಇದು ಸರಿಯಲ್ಲ ಎಂದು ಎಸ್ಡಿಪಿಐ ಪಕ್ಷ ರಾಜ್ಯಾಧ್ಯಕ್ಷ ಇಲ್ಯಾಜ್ ಮೊಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿಯಲ್ಲಿ ನಡೆದ ಅಹಿತಕರ ಘಟನೆ ಖಂಡನೀಯ. ನವೀನ್ ಎಂಬಾತ ನಿರಂತರವಾಗಿ ಪ್ರವಾದಿ ನಿಂದನೆಯನ್ನು ಮಾಡಿದ್ದಾನೆ. ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕುರಿತು ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ, ಪೊಲೀಸರು ತಕ್ಷಣವೇ ಬಂಧಿಸುವ ಬದಲಾಗಿ ಎರಡು-ಮೂರು ಗಂಟೆ ಸಮಯ ಕೊಡಿ ಎಂದು ಕೇಳಿದ್ದರು ಎಂದು ತಿಳಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಎಂಬ ಕಾರಣಕ್ಕೆ ರಾತ್ರಿ 11.30 ಗಂಟೆಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮೊದಲೇ ಆಕ್ರೋಶಗೊಂಡಿದ್ದ ಜನ, ಪೊಲೀಸರ ನಿರ್ಲಕ್ಷ್ಯದ ಮಾತು ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಅಶಾಂತಿಯ ವಾತಾವರಣ ಉಂಟಾಯಿತು. ಇದಾಗಬಾರದಿತ್ತು ಎಂದು ಹೇಳಿದರು.
ಮೂರು ಜೀವಗಳು ಬಲಿಯಾಗಲು ಪೊಲೀಸರ ನಿರ್ಲಕ್ಷ್ಯ ಹಾಗೂ ನವೀನ್ ಪ್ರಚೋದನಕಾರಿ ಪೋಸ್ಟ್ ಕಾರಣ. ಮುಜಾಮಿಲ್ ಪಾಷಾ ಹಾಗೂ ಎಸ್ಡಿಪಿಐ ಪಕ್ಷದ ಇತರ ಮುಖಂಡರು ಪೊಲೀಸರೊಂದಿಗೇ ಸೇರಿ ಜನರನ್ನು ಸಮಾಧಾನಪಡಿಸುತ್ತಿರುವ ವಿಡಿಯೋ ಇದೆ. ಬಹಳಷ್ಟು ಜನರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಯಾರೂ ಕೂಡಾ ಅಶಾಂತಿ ಮಾಡಬೇಡಿ ಎಂದು ಹೇಳಿ ಪೊಲೀಸರ ಸಮ್ಮುಖದಲ್ಲಿ ಜನರನ್ನು ಸಮಾಧಾನ ಮಾಡಿದ್ದಾರೆ ಎಂಬುದು ವಿಡಿಯೋದಲ್ಲಿದೆ ಎಂದರು.
ಆದರೆ, ಮುಜಾಮಿಲ್ ಪಾಷಾನ ಮೇಲೆಯೇ ಪ್ರಕರಣ ಹಾಕಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದು ಪೊಲೀಸ್, ಸರ್ಕಾರ, ಇಂಟಲಿಜೆನ್ಸ್ ವೈಫಲ್ಯ ಮರೆಮಾಚಲು ಎಸ್ಡಿಪಿಐ ಪಕ್ಷವನ್ನು ಎಳೆದುತರುವಂತಹ ಪ್ರಯತ್ನ. ಜನರು ಈ ತಪ್ಪು ಸಂದೇಶವನ್ನು ನಂಬಬಾರದು. ಪಕ್ಷವು ಜನರು ಹಾಗೂ ನ್ಯಾಯದ ಪರ ಇರುತ್ತದೆ ಎಂದು ಹೇಳಿದರು.