ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಲೆಕ್ಕ ಯಾರಿಗೆ ಕೊಡಬೇಕು? ಜನಪ್ರತಿನಿಧಿಗಳಿಗೆ, ಜನರಿಗೆ ಸರ್ಕಾರ ಉತ್ತರ ಕೊಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಲೆಕ್ಕ ಕೇಳುವ ಕಾಂಗ್ರೆಸ್ ಅವರಿಗೆ ಕೆಲಸ ಇಲ್ಲ ಎಂದು ಸಚಿವ ಸುಧಾಕರ್ ನೀಡಿದ್ದ ಹೇಳಿಕೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸುಧಾಕರ್ ಹೇಗಾದರೂ ಮಾತಾಡಲಿ. ಆದರೆ, ಸರ್ಕಾರಕ್ಕೆ ಉತ್ತರದಾಯಿತ್ವ ಇರಬೇಕು. ನಾನು ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಎಂದು ಕೇಳಿದ್ದೇನೆ. ಈ ಸಂಬಂಧ ಮೂರು ಬಾರಿ ಪತ್ರ ಬರೆದಿದ್ದೇನೆ, ಉತ್ತರ ಕೊಟ್ಟಿದ್ದಾರಾ? ನಿನ್ನೆ ಸಿಎಂ ಅವರು ಸುಳ್ಳು ಹೇಳಿದ್ದಾರೆ. ದುಡ್ಡು ಹೊಡೆಯುವುದಕ್ಕೆ ನಮ್ಮ ಸಹಕಾರ ಇಲ್ಲ. ಜನರ ಜೀವ ಉಳಿಸಲು ಸಹಕಾರ ಇದೆ ಎಂದರು.
ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದೆಲ್ಲ ಮುಗಿದು ಹೋದ ಕಥೆ. ಏಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೊಯ್ತು, ಬಿಜೆಪಿ ಸರ್ಕಾರ ಇದೆ. ಇವರ ಬಗ್ಗೆ ಮಾತನಾಡುವುದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತನಾಡಲಿ? ಅವರ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ, ಇವರು ಬರೆದಿರೋ ಕನ್ನಡವೆಲ್ಲ ಅರ್ಥವಾಗಲ್ಲ ಎಂದರು.