ಬೆಂಗಳೂರು : ಸುಮಾರು ಮೂರು ವರ್ಷಗಳ ಬಳಿಕ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸ ಮಾಡಿರಲಿಲ್ಲ. ಇದೀಗ ಅವರು ಬೆಂಗಳೂರಿಗೆ ಆಗಮಿಸಿರುವುದು ಕಾಂಗ್ರೆಸ್ ನಾಯಕರು ಹಾಗೂ ಯುವ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ.
ಸಂಘಟನಾತ್ಮಕ ದೃಷ್ಟಿಯಿಂದ ಹಾಗೂ ಪಕ್ಷದ ನಾಯಕರ ನಡುವಿನ ಸಮನ್ವಯತೆ ದೃಷ್ಟಿಯಿಂದ ರಾಹುಲ್ ಗಾಂಧಿ ಅವರ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ವೇಳೆ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ, ಬಿಬಿಎಂಪಿ ಚುನಾವಣೆ ತಯಾರಿ, ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಸಮಾಲೋಚನೆ ನಡೆಯಲಿದೆ.
ಕೆಲವು ವಿಷಯಗಳ ಕುರಿತು ವಿಡಿಯೋ ಕಾನರೆನ್ಸ್ ಸಭೆಗಳನ್ನೂ ನಡೆಸಲಿದ್ದಾರೆ. ಇದರ ಜೊತೆಗೆ ಮೊದಲ ಬಾರಿಗೆ ಶಾಸಕರಾಗಿರುವವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಶೃಂಗಾರಗೊಂಡಿರುವ ಕ್ವೀನ್ಸ್ ರಸ್ತೆ, ಕೆಪಿಸಿಸಿ ಕಚೇರಿ : ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಕ್ವೀನ್ಸ್ ರಸ್ತೆ ಹಾಗೂ ಕೆಪಿಸಿಸಿ ಕಚೇರಿ ಶೃಂಗಾರಗೊಂಡಿದೆ. ಕ್ವೀನ್ಸ್ ರಸ್ತೆ ಉದ್ದಕ್ಕೂ ಎರಡು ಬದಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕಟೌಟ್ ಮತ್ತು ಬ್ಯಾನರ್ಗಳು ರಾರಾಜಿಸುತ್ತಿವೆ.
ಇದರ ಜೊತೆಗೆ ರಾಷ್ಟ್ರೀಯ ನಾಯಕರಾದ ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಲೀಂ ಅಹ್ಮದ್ ಸೇರಿದಂತೆ ಹಲವು ನಾಯಕರ ಬ್ಯಾನರ್ಗಳು ರಸ್ತೆಯಲ್ಲಿ ಮತ್ತು ಕೆಪಿಸಿಸಿ ಕಚೇರಿ ಸುತ್ತಲೂ ರಾರಾಜಿಸುತ್ತಿವೆ. ಎಲ್ಲಿ ನೋಡಿದರೂ ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ. ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತರು ಘೋಷಣೆ ಹಾಕುವ ಮೂಲಕ ನಾಯಕರನ್ನು ಸ್ವಾಗತಿಸಿದ ದೃಶ್ಯ ಕಂಡು ಬಂತು.
ಟ್ರಾಫಿಕ್ ಜಾಮ್ : ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳಿರುವ ಕಾರಣ ಹೆಚ್ಚಿನ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗಮಿಸಿದ್ದರಿಂದ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ. ಇದರ ಬಿಸಿ ಅಕ್ಕಪಕ್ಕದ ರಸ್ತೆಗಳಿಗೂ ತಟ್ಟಿದೆ.