ಬೆಂಗಳೂರು: ತಮ್ಮ ಬೆಂಬಲಿಗರಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬುದ್ಧಿ ಮಾತನ್ನು ಹೇಳಿದ್ದಾರೆ. ತನ್ನನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಬೇಡಿ ಎಂದು ಶಾಸಕರಿಗೆ ಸೂಚಿಸುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಏನೋ ಮಾತಾಡಿದ್ದಾರೆ. ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ. ನಾನು ಯಾವತ್ತೂ ಮುಖ್ಯಮಂತ್ರಿ ಆಗಬೇಕು ಅಂತ ಹೇಳಲ್ಲ. ಆದರೆ ನಾನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಬೇಡಿ ಎಂದು ತಮ್ಮ ಬೆಂಬಲಿಗ ಶಾಸಕರುಗಳಿಗೆ ಮನವಿ ಮಾಡುವುದಾಗಿ ಹೇಳಿದರು.
ಇನ್ನೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಮ್ಮ ಬೆಂಬಲಿಗ ಶಾಸಕರು ಇನ್ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಶಾಸಕರಲ್ಲಿ ಮನವಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಹೇಳಿಕೆ ನೀಡಬಾರದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಷ್ಟೋ ಜನ ಗೆಲ್ಲಲ್ಲ..
ಮತ್ತೊಂದೆಡೆ ನಗರದಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋದು ಶಾಸಕರ ವೈಯಕ್ತಿಕ ಅಭಿಪ್ರಾಯ. ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದರು. ಇದರಿಂದ ಮತ್ತೆ ಅವ್ರೇ ಸಿಎಂ ಆಗ್ಬೇಕು ಎಂದು ಕೆಲವರು ಹೇಳುತ್ತಾರೆ. ಅದ್ರಲ್ಲಿ ತಪ್ಪಿಲ್ಲ, ಅದು ವೈಯಕ್ತಿಕ ಹೇಳಿಕೆ. ಸಿದ್ದರಾಮಯ್ಯ ಒಬ್ಬರೇ ಸಿಎಂ ಅಭ್ಯರ್ಥಿ ಅಲ್ಲ. ಡಿ.ಕೆ ಶಿವಕುಮಾರ್, ಹೆಚ್.ಕೆ. ಪಾಟೀಲ್, ಆರ್.ವಿ ದೇಶಪಾಂಡೆ, ಕೆ.ಎಚ್ ಮುನಿಯಪ್ಪ ಹೀಗೆ ಸಾಕಷ್ಟು ನಾಯಕರು ಇದ್ದಾರೆ ಎಂದರು.
ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಪಕ್ಷ ಅಧಿಕಾರಕ್ಕೆ ಬಂದ್ಮೇಲೆ ಅವತ್ತು ಶಾಸಕರು ಸಿಎಂರನ್ನು ಆಯ್ಕೆ ಮಾಡುತ್ತಾರೆ. ಈಗ ಮಾತನಾಡುವವರೆಲ್ಲ ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು. ಎಷ್ಟೋ ಜನ ಗೆಲ್ಲಲ್ಲ, ಹೊಸಬರು ಆಯ್ಕೆಯಾಗುತ್ತಾರೆ. ಅಂತಿಮವಾಗಿ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಲಿದೆ. ಬಿಜೆಪಿಯ ಆಡಳಿತ ವಿರೋಧಿ ನೀತಿ ವಿರುದ್ಧ ನಾವು ಈಗ ಮೊದಲು ಹೋರಾಟ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ:NEXT CM ಪರಮೇಶ್ವರ್ ಎಂದು ಅಭಿಮಾನಿಗಳ ಘೋಷಣೆ.. ಬಾಯಿ ಮುಚ್ಚಿ ಎಂದ ಮಾಜಿ ಡಿಸಿಎಂ