ಬೆಂಗಳೂರು:ದೇವರನಾಡು ಕೇರಳ ಅಂದ್ರೆ ನಮಗೆ ಮೊದಲು ನೆನಪಾಗೋದು ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಓಣಂ ಹಬ್ಬ. ಓಣಂ ಹಬ್ಬವನ್ನು ಬೆಂಗಳೂರಿನಲ್ಲಿರುವ ಮಲಯಾಳಿಗಳು ಬಹು ದೊಡ್ಡ ಹಬ್ಬವಾಗಿ ಆಚರಿಸಿದ್ದಾರೆ. ರಾಜಧಾನಿಯ ಕೇರಳಿಗರು ಒಟ್ಟಾಗಿ ತಮ್ಮ ಹಬ್ಬವನ್ನು ತಮ್ಮ ಮನೆಗಳಲ್ಲಿಯೇ ಆಚರಿಸಿದ್ರು.
ಹೂವಿನ ರಂಗೋಲಿ, ಸಾಂಪ್ರದಾಯಿಕ ಉಡುಗೆ ತೊಟ್ಟು ಕೇರಳ ಮೂಲದ ಹೆಂಗಸರು ಸಾಂಪ್ರದಾಯಿಕ ನೃತ್ಯ ಮಾಡಿದ್ರು. ಸಾಮಾನ್ಯವಾಗಿ ಉದ್ಯಾನ ನಗರಿಯಲ್ಲಿರೋ ಕೇರಳಿಗರು ಒಟ್ಟುಗೂಡಿ ತಮ್ಮ ಕೇರಳ ಸಂಘದ ವತಿಯಿಂದ ಪ್ರತಿ ವರ್ಷ ಅದ್ಧೂರಿಯಾಗಿ ಓಣಂ ಹಬ್ಬವನ್ನ ಆಯೋಜಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿ ನೆರಳು ಎಲ್ಲ ಹಬ್ಬಗಳ ಮೇಲೆ ಬೀರಿದ್ದು, ಯಾವ ಹಬ್ಬವನ್ನೂ ಕೂಡ ಆಚರಿಸಲು ಆಗುತ್ತಿಲ್ಲ.
ಹತ್ತು ದಿನಗಳ ಕಾಲ ಓಣಂ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಹಬ್ಬದ ಪ್ರಯುಕ್ತ ಪೂಕಳಂ ಅಂದ್ರೆ ಹೂವಿನ ರಂಗೋಲಿಯನ್ನ ಬಿಡಿಸಲಾಗುತ್ತೆ.. ಹಬ್ಬದ ದಿನ ತರಹೇವಾರಿ ಖಾದ್ಯಗಳನ್ನು ತಯಾರಿಸುತ್ತಾರೆ.. ಜೊತೆಗೆ ವಿವಿಧ ಹೂವು ಮತ್ತು ವೆರೈಟಿ ಖಾದ್ಯಗಳನ್ನು ಮಾಡಿ ಕೇರಳಿಗರು ಹಬ್ಬವನ್ನ ಸಂಭ್ರಮಿಸುತ್ತಾರೆ.. ನಂತರ ಕುಟುಂಬಸ್ಥರೆಲ್ಲ ತಯಾರಿಸಿದ ಹಬ್ಬದೂಟವನ್ನ ಸವಿಯುತ್ತಾರೆ.
ಒಟ್ಟಾರೆ ಕೊರೊನಾ ಇರೋದನ್ನ ಮರೆಯದೇ, ಹಬ್ಬದ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿ, ಮಲಯಾಳಿಗರೆಲ್ಲರೂ ಜಾಗೃತೆಯಿಂದ ಹಬ್ಬವನ್ನ ಸರಳವಾಗಿಯೇ ತಮ್ಮ ಮನೆಗಳಲ್ಲಿ ಆಚರಿಸಿದ್ದಾರೆ.