ಬೆಂಗಳೂರು : ಸಚಿವರ ವಿರುದ್ಧ ಅಸಾಂವಿಧಾನಿಕ ಪದ ಬಳಕೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ವಿಧಾನಸಭೆ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮ 363ರ ಅಡಿ ಕ್ರಮಕೈಗೊಳ್ಳುವಂತೆ ಸಚಿವರು ಸೇರಿ ಬಿಜೆಪಿಯ 15ಕ್ಕೂ ಹೆಚ್ಚಿನ ಶಾಸಕರು ಸಹಿ ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೋಟಿಸ್ ಕಳಿಸಿಕೊಟ್ಟಿದ್ದಾರೆ.
ಮಾರ್ಚ್ 10ರಂದು ರಾಜ್ಯ ವಿಧಾನಸಭೆ ಕಲಾಪದಲ್ಲಿ ಸಂವಿಧಾನದ ಬಗೆಗಿನ ಚರ್ಚೆ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಮಾತನಾಡುತ್ತಿದ್ದಾಗ, ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಮತ್ತು ಇತರರು ಪದೇಪದೆ ಸಚಿವರ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದರು. ಅದನ್ನು ಲೆಕ್ಕಿಸದೇ ಸಚಿವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಮತ್ತು ರಾಜೀನಾಮೆ ಬಗ್ಗೆ ಗೌರವಾನ್ವಿತ ಭಾರತದ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪನ್ನು ಆಧರಿಸಿ ಶಾಸಕರ ರಾಜೀನಾಮೆ ಬಗ್ಗೆ ಉಲ್ಲೇಖಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಆವೇಶಭರಿತರಾಗಿ ಸರ್ವೋಚ್ಛ ನ್ಯಾಯಾಲಯದ ಆದೇಶದ ಬಗ್ಗೆ ಇಲ್ಲಿ ಉಲ್ಲೇಖ ಮಾಡುವಂತಿಲ್ಲ ಎಂದು ರಮೇಶ್ಕುಮಾರ್ ಆಕ್ಷೇಪಿಸಿದರು. ಆದರೆ, ಅದನ್ನು ಉಲ್ಲೇಖಿಸುವ ಅಧಿಕಾರ ಇದೆ ಎಂದು ಸಚಿವರು ಹೇಳಿದಾಗ, ರಮೇಶ್ಕುಮಾರ್ ಏಕಾಏಕಿ ಸದನದ ಬಾವಿಗೆ ಬಂದು ಏಕ ವಚನದಲ್ಲಿ ಅವ್ಯಾಚ ಶಬ್ದಗಳನ್ನು ಪ್ರಯೋಗಿಸಿದ್ದಾರೆ.
ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲ ಉಂಟಾಗಿ ಪೀಠದಲ್ಲಿ ಆಸೀನರಾಗಿದ್ದ ಸಭಾಧ್ಯಕ್ಷರು ಸದನವನ್ನು ಕೆಲ ಸಮಯ ಮುಂದೂಡಿರುತ್ತಾರೆ. ರಮೇಶ್ಕುಮಾರ್ ಅವರ ವರ್ತನೆ ಹಾಗೂ ಪದ ಬಳಕೆಯಿಂದ ಕೇವಲ ಸಚಿವರಿಗೆ ಮಾತ್ರ ಅವಮಾನವಾಗದೇ, ಇಡೀ ಸದನಕ್ಕೆ ಹಾಗೂ ಎಲ್ಲಾ ಶಾಸಕರಿಗೆ ಅವಮಾನವಾಗಿದೆ. ಈ ಘಟನೆಯು ಕರ್ನಾಟಕ ವಿಧಾನಸಭೆಗೆ ಒಂದು ಕಪ್ಪು ಚುಕ್ಕೆ. ಇಂತಹ ಘಟನೆ ಪುನರಾವರ್ತನೆ ಆಗುವುದನ್ನು ತಪ್ಪಿಸಲು ಈ ಘಟನೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಶಿಕ್ಷೆ ನೀಡಬೇಕಾಗುತ್ತದೆ. ಆದುದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ, ಈ ರೀತಿ ಅವಾಚ್ಯ ಶಬ್ಧಗಳನ್ನು ಬಳಸಿದ ಸದನದ ಸದಸ್ಯ ರಮೇಶ್ ಕುಮಾರ್ ಅವರಿಗೆ ಈ ಅಧಿವೇಶನ ಮುಕ್ತಾಯವಾಗುವವರೆಗೆ ಅಮಾನತಿನಲ್ಲಿಡುವಂತೆ ವಿನಂತಿಸುತ್ತೇವೆ ಎಂದು 15ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿ ಸ್ಪೀಕರ್ಗೆ ನೋಟಿಸ್ ಕಳುಹಿಸಿಕೊಟ್ಟಿದ್ದಾರೆ.