ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೂ ಮೊದಲೇ ತಾನು ಸೂಚಿಸದ ಐವರ ಹೆಸರನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ ಎಂಬ ವಿಚಾರವನ್ನು ಆಯ್ಕೆ ಸಮಿತಿ ಸದಸ್ಯೆ ವಿಡಿಯೋ ಮುಖೇನ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಆಯ್ಕೆ ಸಮಿತಿಯ ಯಾವೊಬ್ಬ ಸದಸ್ಯರೂ ಸಮಿತಿಯ ಗುಟ್ಟು ಬಿಟ್ಟುಕೊಡುವಂತಿಲ್ಲ. ಆದರೂ ಇದೇ ಮೊದಲ ಬಾರಿಗೆ ಆಯ್ಕೆ ಸಮಿತಿಯ ಗುಟ್ಟು ರಟ್ಟಾಗಿದೆ. ಆಯ್ಕೆ ಸಮಿತಿ ಸದಸ್ಯೆಯಾಗಿರುವ ನಿರುಪಮಾ ತಾನು ಸೂಚಿಸಿರುವ ರಾಘವೇಂದ್ರ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ ಎಂಬುದನ್ನು ತಿಳಿದು ಸಂತಸವಾಗಿದೆ ಎಂದಿದ್ದಾರೆ.
ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರಿಗೆ ಸಂಘ ಸಂಸ್ಥೆಗಳ ಕೆಟಗರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಹೋಟೆಲ್ ಮಾಲಿಕ ರಾಘವೇಂದ್ರ ಸೇರಿದಂತೆ ಐವರ ಹೆಸರನ್ನು ನನ್ನ ಕಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಿಳಿಸಿದ್ದೆ. ನನ್ನ ಆಯ್ಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಮತ್ತು ಸಿಎಂ ಯಡಿಯೂರಪ್ಪ ಗೌರವಿಸಿ ಪ್ರಶಸ್ತಿ ನೀಡಿದ್ದಾರೆ ಎಂದು ಹೇಳಿದ್ದಾರೆ.