ಬೆಂಗಳೂರು: ಕೋವಿಡ್ ಕರಿಛಾಯೆಯ ನಡುವೆಯು ರಾಷ್ಟ್ರೀಯ ತೋಟಗಾರಿಕಾ ಮೇಳ ಯಶಸ್ವಿಯಾಗಿದೆ. 5 ದಿನಗಳು ನಡೆದ ಮೇಳದಲ್ಲಿ ರಾಜ್ಯ ಸೇರಿದಂತೆ ಹೊರರಾಜ್ಯದ ರೈತರು ಭೇಟಿ ನೀಡಿ ಮಾಹಿತಿ ಪಡೆದರು. ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಒಟ್ಟು 16 ಲಕ್ಷ ಜನರು ಮೇಳವನ್ನು ವಿಕ್ಷಿಸಿದ್ದಾರೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ 'ರಾಷ್ಟ್ರೀಯ ತೋಟಗಾರಿಕೆ ಮೇಳ' ರಾಜ್ಯ, ಹೊರರಾಜ್ಯಗಳ ರೈತರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಇದೊಂದು ದೇಶಕ್ಕೆ ಮಾದರಿಯಾದ ಮೇಳವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಹೇಳಿದ್ದಾರೆ.
ಮೇಳದ ಸಮಾರೋಪ ಸಮಾರಂಭದ ವೇಳೆ ಮಾತನಾಡಿದ ಅವರು, ಈ ಬಾರಿ ಮೇಳವನ್ನು 'ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಭಾರತಕ್ಕಾಗಿ ತೋಟಗಾರಿಕೆ' ಎಂಬ ಶೀರ್ಷಿಕೆಯೊಂದಿಗೆ ಆರಂಭಿಸಿದೆವು. ಮೇಳವು ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಕಂಡಿತು. ಆನ್ಲೈನ್ ಮತ್ತು ಆಪ್ಲೈನ್ ಎರಡರಿಂದಲೂ ಸುಮಾರು 16 ಲಕ್ಷಕ್ಕೂ ಹೆಚ್ಚು ಜನರು ಮೇಳವನ್ನು ವೀಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಐದು ದಿನಗಳ ಮೇಳದಲ್ಲಿ ಬೀಜೋತ್ಪಾದನೆ ಮಾರಾಟ, ಬೇರೆ ಬೇರೆ ಮೌಲ್ಯಧಾರಿತ ಉತ್ಪನ್ನಗಳ ಇವೆಲ್ಲವೂ ಸೇರಿದಂತೆ ಸುಮಾರು 12 ರಿಂದ 15 ಲಕ್ಷ ರೂ. ಮೌಲ್ಯದಷ್ಟು ಮಾರಾಟ ಮಾಡಲಾಗಿದೆ. ವಿಶೇಷವಾಗಿ, ಹೊಸ ರೀತಿಯ ವಿಧಾನಗಳನ್ನು ಸಾವಯವ ಕೃಷಿಗೆ ಒತ್ತು ಕೊಡುವ ಉತ್ಪನ್ನಗಳನ್ನು ಮತ್ತು ಹೊಸ ತಳಿಗಳನ್ನು ಅದರಲ್ಲೂ ರೋಗನಿರೋಧಕ ತಳಿಗಳನ್ನು ಪ್ರದರ್ಶನ ಮಾಡಿದ್ದು ರೈತರ ಮೆಚ್ಚುಗೆಗೆ ಪಾತ್ರವಾಯಿತು.
ಐಐಹೆಚ್ಆರ್ ಸಂಸ್ಥೆಯ 15 ತಂತ್ರಜ್ಞಾನಗಳನ್ನ ಒಡಂಬಡಿಕೆ ಮಾಡಿಕೊಂಡಿರುವ 7 ಜನರು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಎಂದು ಡಾ. ದಿನೇಶ್ ಹೇಳಿದರು. ಇನ್ನೂ ತೋಟಗಾರಿಕಾ ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲಿಗಳಿಂದ ರೈತರು ಬಂದಿದ್ದಾರೆ ಮತ್ತ ಉತ್ತರ ಭಾರತದ ರಾಜ್ಯಗಳಿಂದ ಸಹ ಮೇಳಕ್ಕೆ ಭೇಟಿ ನೀಡಿ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದಿದ್ದಾರೆ.