ಬೆಂಗಳೂರು: ನಕಲಿ ವೋಟರ್ ಐಡಿ ಪತ್ತೆ ಪ್ರಕರಣ ವಾಪಸ್ಸು ಪಡೆಯುವ ಕುರಿತು ಸಿಎಂ ಜೊತೆ ಮಾಜಿ ಶಾಸಕ ಮುನಿರತ್ನ ಚರ್ಚೆ ನಡೆಸಿದರು.
ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಗೆ ಶಾಸಕ ಮುನಿರತ್ನ ಭೇಟಿ ನೀಡಿ, ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡರಿಂದ ಕೇಸ್ ವಾಪಸ್ಸು ಪಡೆಸುವ ಕುರಿತು ಚರ್ಚೆ ನಡೆಸಿದರು. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿ ಮಾಡಿದ್ದ ಮುನಿರತ್ನ ಕೇಸ್ ಹಿಂಪಡೆಯುವಂತೆ ತುಳಸಿ ಮುನಿರಾಜುಗೌಡರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ಇಂದು ಬೆಳಗ್ಗೆ ಸಿಎಂ ಭೇಟಿ ಮಾಡಿದ್ದ ಬಿ. ಎಲ್. ಸಂತೋಷ್ ಈ ಬಗ್ಗೆ ಏನಾದರೂ ಚರ್ಚೆ ಆಗಿದೆಯಾ ಎಂಬುದನ್ನು ತಿಳಿಯಲು ಮುನಿರತ್ನ ಬಿಎಸ್ವೈ ನಿವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಇದೇ ವೇಳೆ ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡ ಕೂಡ ಸಿಎಂ ನಿವಾಸಕ್ಕೆ ಆಗಮಿಸಿ, ಸಂಪುಟ ವಿಸ್ತರಣೆ ಮಾಡುತ್ತೇನೆ, ಗೆದ್ದವರಿಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎನ್ನುವ ಸಿಎಂ ಹೇಳಿಕೆ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.