ಬೆಂಗಳೂರು: ಉಪ ಚುನಾವಣೆ ಬಹಿರಂಗ ಪ್ರಚಾರ ನಾಳೆಗೆ ಅಂತ್ಯವಾಗಲಿದ್ದು, ಮಹಾಲಕ್ಷ್ಮೀ ಲೇಔಟ್ನಲ್ಲಿ ಚುನಾವಣಾ ಕಣ ರಂಗೇರಿದೆ. ಕೊನೆ ಹಂತದಲ್ಲಿ ಮತದಾರರನ್ನ ಸೆಳೆಯಲು ಕೈ ಅಭ್ಯರ್ಥಿ ಶಿವರಾಜ್ರಿಂದ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.
ಕುರುಬರಹಳ್ಳಿಯ ಜೆ.ಸಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಹೆಚ್.ಎಂ.ರೇವಣ್ಣ, ಈಶ್ವರ್ ಖಂಡ್ರೆ ಸೇರಿದಂತೆ ಇತರರು ಭಾಗಿಯಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಚುನಾವಣೆ ಯಾವ ಕಾರಣಕ್ಕೆ ಬಂತು ಅಂತ ನಿಮಗೆ ಗೊತ್ತಿದೆ. ಗೋಪಾಲಯ್ಯ ಜೆಡಿಎಸ್ನಿಂದ ಗೆದ್ದಿದ್ದರು. ಜಾತ್ಯಾತೀತವಾಗಿ ಕೆಲಸ ಮಾಡ್ತೀನಿ ಅಂತ ಮತ ಕೇಳಿ ಗೆದ್ದಿದ್ರು. ಆದ್ರೆ ಈಗ ಅದೆಲ್ಲವನ್ನು ಗಾಳಿಗೆ ತೂರಿ ಅಧಿಕಾರದ ಆಸೆಯಿಂದ, ಐಟಿ, ಇಡಿ ಭಯದಿಂದ ಪಕ್ಷಾಂತರಗೊಂಡಿದ್ದಾರೆ ಎಂದರು.
ನಾವು ಜೆಡಿಎಸ್ ಸೇರಿ 14 ತಿಂಗಳು ರಾಜ್ಯಭಾರ ಮಾಡಿದ್ವಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಸಾಕಷ್ಟು ಹಣವನ್ನು ಪಕ್ಷಭೇದವಿಲ್ಲದೆ ಕೊಟ್ಟಿದ್ದಾರೆ. ಆ ಹಣದಿಂದ ಅಭಿವೃದ್ಧಿ ಮಾಡಿದ್ದಾರೆಯೇ ವಿನಾ ಬೇರೆ ಏನೂ ಇಲ್ಲ ಅಂತ ಹೇಳಿದರು.
ಇನ್ನು ಗೋಪಾಲಯ್ಯ ಒಂದು ಕಡೆ ನಾನೇ ಅಭಿವೃದ್ಧಿ ಮಾಡಿದ್ದೀನಿ ಅಂತಾರೆ. ಇನ್ನೋಂದು ಕಡೆ ಈ ಭಾಗದ ಅಭಿವೃದ್ಧಿ ಮಾಡಬೇಕು ಅಂತಲೇ ಬಿಜೆಪಿಗೆ ಹೋದೆ ಅಂತಾರೆ. ಹೇಗೆ ಇವರನ್ನು ನಂಬಬೇಕು ಅಂತ ಪ್ರಶ್ನೆ ಮಾಡಿದರು. ಇವರಿಗೆ ಬಿಜೆಪಿಯವರು ಬೊಂಬಾಯಿ ಮಿಠಾಯಿ ತೋರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಫಡ್ನವೀಸ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನೋರು. ಈಗ ಏನಾಗಿದೆ ಕಥೆ ಅಂತ ಖರ್ಗೆ ಎಳೆ ಎಳೆಯಾಗಿ ವಿವರಿಸಿದರು.